ಬೆಂಗಳೂರು: ಸೊಂಟದ ಮೂಳೆ ಜೋಡಣೆ ಮತ್ತು ಆಧುನಿಕ ಶಸ್ತ್ರ ಚಿಕಿತ್ಸೆಯ ಬಗ್ಗೆ ನಗರದ ಸಂಜಯಗಾಂಧಿ ಮೂಳೆ ರೋಗಗಳ ಆಸ್ಪತ್ರೆಯಲ್ಲಿ ಶನಿವಾರ ದಕ್ಷಿಣ ಭಾರತ ಮಟ್ಟದ ವಿಶೇಷ ಉಪನ್ಯಾಸ ಹಾಗೂ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಮಹಾರಾಷ್ಟ್ರ, ಕೇರಳ, ತಮಿಳುನಾಡು, ಕರ್ನಾಟಕದ 120 ಆಸ್ಪತ್ರೆಗಳ ವೈದ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಮುಂಬೈ ಆಸ್ಪತ್ರೆಯ ಅಜಿತ್ಕುಮಾರ್ ಶೆಟ್ಟಿ ಮತ್ತು ಮಣಿಪಾಲ್ ಆಸ್ಪತ್ರೆಯ ಶರತ್ಲಾಲ್ ಅವರು ಮೂಳೆ ಜೋಡಣೆ ಹಾಗೂ ಶಸ್ತ್ರಚಿಕಿತ್ಸೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅಸ್ತಿ ಪಂಜರ ಬಳಸಿ ಮೂಳೆ ಜೋಡಣೆ ಬಗ್ಗೆ ಪ್ರಾಯೋಗಿಕವಾದ ವಿಸ್ತೃತ ಮಾಹಿತಿ ನೀಡಲಾಯಿತು. ಶವಕ್ಕೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮುರಿದ ಮೂಳೆಯನ್ನು ಹೇಗೆ ಜೋಡಿಸಬೇಕು ಎಂಬುದರ ಬಗ್ಗೆ ವೈದ್ಯರಿಗೆ ವಿವರಣೆ ನೀಡಲಾಯಿತು.
`ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿ ನಡೆಯಿತು. ನಿರೀಕ್ಷೆಗಿಂತಲೂ ಹೆಚ್ಚಿನ ವೈದ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಉಪಯೋಗ ಪಡೆದುಕೊಂಡರು. ಮೂಳೆ ಜೋಡಣೆಯ ಹೊಸ ಸಾಧ್ಯತೆಗಳ ಬಗ್ಗೆ ಸುದೀರ್ಘವಾದ ಉಪನ್ಯಾಸ ನೀಡಲಾಯಿತು. ಪ್ರಾಯೋಗಿಕ ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಲಾಯಿತು~ ಎಂದು ಸಂಜಯಗಾಂಧಿ ಮೂಳೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಬಿ.ಜಿ.ತಿಲಕ್ ತಿಳಿಸಿದ್ದಾರೆ.