ಸೊರಬ (ಶಿವಮೊಗ್ಗ ಜಿಲ್ಲೆ): ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗಾಗಿ ಯಾವುದೇ ರೀತಿಯ ಕರಪತ್ರಗಳು, ಬ್ಯಾನರ್, ಬಂಟಿಂಗ್ಸ್ ಹಾಗೂ ಸಂಪನ್ಮೂಲ ಬಾರದ ಕಾರಣ ತಾವು ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಬಾಸೂರು ಚಂದ್ರೇಗೌಡ ತಿಳಿಸಿದರು.
ತಾಲ್ಲೂಕಿನ ಪುಟ್ಟನಹಳ್ಳಿ ಗ್ರಾಮದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿ-ಫಾರಂ ಕೊಡುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಯಿಂದ ರೂ 10 ಸಾವಿರ ವಸೂಲಿ ಮಾಡಿ ಪಕ್ಷದಿಂದ ಟಿಕೆಟ್ ಕೊಡುವುದಾಗಿ ತಿಳಿಸಿದ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮಲು, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಿ- ಫಾರಂ ಕೊಡದೇ ಸತಾಯಿಸಿ, ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಕೊಟ್ಟಿದ್ದಾರೆ. ಈ ಮೂಲಕ ನಾನು ಸ್ಪರ್ಧಿಸದಂತೆ ನೋಡಿಕೊಳ್ಳಲು ಈ ತಾಲ್ಲೂಕಿನ ವಿಧಾನಸಭಾ ಅಭ್ಯರ್ಥಿಗಳು ಶ್ರೀರಾಮಲು ಅವರಿಗೆ ಒತ್ತಡ ಹೇರಿದ್ದಾರೆ' ಎಂದು ಅವರು ದೂರಿದರು.
`ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ನಾನು ಅಡ್ಡಗಾಲಾಗಿರುವುದಾಗಿ ಭಾವಿಸಿ ಶ್ರೀರಾಮಲು ಜತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿದರು. `ಮೊದಲೇ ಇದನ್ನು ಶ್ರೀರಾಮಲು ಹೇಳಿದ್ದರೆ ನಾನು ಪಕ್ಷೇ ತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೆ' ಎಂದರು.
`ಈ ಹಿಂದೆ ದಿ. ಬಂಗಾರಪ್ಪ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 30 ಸಾವಿರ ಮತ ಪಡೆದು 2ನೇ ಸ್ಥಾನ ಗಳಿಸಿದ್ದೇನೆ. ನಾನು ಈ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲ ನೀಡಿದರೂ ಗೆಲುವು ನಿಶ್ಚಿತ. ಬೆಂಬಲಿಗರು ಹಾಗೂ ಅಭಿಮಾನಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು' ಎಂದು ಚಂದ್ರೇಗೌಡ ತಿಳಿಸಿದರು.