ನವದೆಹಲಿ (ಪಿಟಿಐ): ಯೋಗ ಗುರು ಬಾಬಾ ರಾಮ್ದೇವ್ ಮೇಲೆ ನಡೆದ ಮಸಿ ದಾಳಿಯಿಂದ ಸಿಟ್ಟಿಗೆದ್ದ ಅವರ ಅಭಿಮಾನಿಗಳು ಇಲ್ಲಿನ ಕಾಂಗ್ರೆಸ್ ಪ್ರಧಾನ ಕಚೇರಿ ಮುಂಭಾಗದಲ್ಲಿದ್ದ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪೋಸ್ಟರ್ ಮೇಲೆ ಮಸಿ ಬಳಿದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಆದರೆ ಈ ಘಟನೆಯನ್ನು ರಾಮ್ದೇವ್ ಖಂಡಿಸಿದ್ದು, ಇದೊಂದು ಪ್ರಜಾಪ್ರಭುತ್ವ ವಿರೋಧಿ ನೀತಿ ಮತ್ತು ಅನಾಗರಿಕ ವರ್ತನೆ ಎಂದಿದ್ದಾರೆ.
ಇಲ್ಲಿನ ಅಕ್ಬರ್ ರಸ್ತೆಯಲ್ಲಿನ ಕಾಂಗ್ರೆಸ್ ಮುಖ್ಯ ಕಚೇರಿ ಎದುರು `ಯುವ ಭಾರತ್ ಕಿಸಾನ್ ಪಂಚಾಯತ್~ ಹೆಸರಿನ ಕೆಲವು ಜನರು ಸೇರಿದ್ದು, ಎರಡು ದಿನಗಳ ಹಿಂದೆ ರಾಮ್ದೇವ್ ಮೇಲೆ ನಡೆದ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವರು ಸೋನಿಯಾ ಗಾಂಧಿ ಅವರ ಪೋಸ್ಟರ್ ಮೇಲೆ ಮಸಿ ಬಳಿದರು.