ನವದೆಹಲಿ (ಪಿಟಿಐ): ‘ನ್ಯಾಷನಲ್ ಹೆರಾಲ್ಡ್’ ಅವ್ಯವಹಾರ ಆರೋಪ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಐವರು ಆರೋಪಿಗಳಿಗೆ ಖುದ್ದು ಹಾಜರಾತಿಯಿಂದ ಮಂಗಳವಾರದ ಮಟ್ಟಿಗೆ ವಿಚಾರಣಾ ನ್ಯಾಯಾಲಯ ವಿನಾಯಿತಿ ನೀಡಿತು. ಆದರೆ ಇದೇ 19ರಂದು ಹಾಜರಾಗುವಂತೆ ನಿರ್ದೇಶನ ನೀಡಿತು.
ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಹರಿಣ್ ರಾವಲ್ ಮತ್ತು ರಮೇಶ್ ಗುಪ್ತಾ ಹಾಜರಾಗಿದ್ದರು.
ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಆರೋಪಿಗಳ ಪರವಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಿದರು.
‘ನ್ಯಾಯಾಲಯದ ಮುಂದೆ ಹಾಜರಾಗಲು ಕಕ್ಷಿದಾರರು ಉತ್ಸುಕರಾಗಿದ್ದಾರೆ. ದೂರುದಾರ ಸುಬ್ರಮಣಿಯನ್ ಸ್ವಾಮಿ ಅವರಿಗೆ ಅನುಕೂಲಕರ ದಿನಾಂಕವೊಂದನ್ನು ನಿಗದಿಪಡಿಸಿ’ ಎಂದು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಲವ್ಲೀನ್ ಅವರ ಮುಂದೆ ಸಿಂಘ್ವಿ ಮನವಿ ಮಾಡಿದರು. ಈ ಮನವಿಯನ್ನು ಒಪ್ಪಿಕೊಂಡ ಮ್ಯಾಜಿಸ್ಟ್ರೇಟ್, ಡಿ.19 ರಂದು ಎಲ್ಲ ಆರೋಪಿಗಳೂ ನ್ಯಾಯಾ ಲಯದ ಮುಂದೆ ಹಾಜರಾಗುವಂತೆ ನೋಡಿಕೊಳ್ಳಿ. ಅಂದು ಬೆಳಿಗ್ಗೆ ಬಂದು ಅರ್ಜಿ ಹಾಕಬೇಡಿ, ವಿಚಾರಣೆ ನಿಗದಿಯಾಗಿರುವ ದಿನ ಮಧ್ಯಾಹ್ನ 3 ಗಂಟೆಗೆ ಬನ್ನಿ’ ಎಂದು ಹೇಳಿದರು.