ಬಳ್ಳಾರಿ (ಪಿಟಿಐ): ಜಿಲ್ಲೆಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಜೀವ ಬೇದರಿಕೆ ಹಾಕಿದ ಆರೋಪ ಮೇಲೆ ಶಾಸಕ ಜಿ. ಸೋಮಶೇಖರ ರೆಡ್ಡಿ ಹಾಗೂ ಇತರೆ 13 ಜನರ ವಿರುದ್ಧ ಸಂಡೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಬುಧವಾರ ಆರೋಪಪಟ್ಟಿ ಸಲ್ಲಿಸಲಾಗಿದೆ.
ಸಂಡೂರು ತಾಲೂಕಿನ ರಾಮಗಢದ ಸಂರಕ್ಷಿತ ಅರಣ್ಯದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಭೇಟಿ 2009ರಲ್ಲಿ ಭೇಟಿ ನೀಡಿದ್ದ ಅರಣ್ಯ ಸಂರಕ್ಷಣಾಧಿಕಾರಿ ಯು.ವಿ.ಸಿಂಗ್ ಅವರು ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ನಡೆಸಿರುವುದನ್ನು ಪತ್ತೆ ಮಾಡಿ. ಅವರಿಗೆ ಸೇರಿದ್ದ 9 ವಾಹನಗಳನ್ನು ಜಪ್ತಿ ಮಾಡಿದ್ದರು. ನಂತರದಲ್ಲಿ ಸೋಮಶೇಖರ ರೆಡ್ಡಿ ಹಾಗೂ ಬಳ್ಳಾರಿ ಪಾಲಿಕೆ ಸದಸ್ಯ ಕೆ.ಎಸ್.ದಿವಾಕರ್ ಅವರು ಸಿಂಗ್ ಅವರಿಗೆ ಜೀವ ಬೇದರಿಕೆ ಹಾಕಿದ್ದರು ಎನ್ನಲಾಗಿದೆ.
ನಂತರ ಅರಣ್ಯಾಧಿಕಾರಿ ರಾಮಲಿಂಗಯ್ಯ ಅವರು ಅಕ್ರಮ ಗಣಿಗಾರಿಕೆ ಹಾಗೂ ಜೀವ ಬೇದರಿಕೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದರು.
ದೂರಿನ ವಿಚಾರಣೆ ಕೈಗೆತ್ತಿಕೊಂಡ 2011ರಲ್ಲಿ ವಿಚಾರಣೆ ನಡೆಸಿದ ಜಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಡಿ. ನಾಗರಾಜ್ ಅವರು 125 ಪುಟಗಳ ಆರೋಪ ಪಟ್ಟಿ ಸಿದ್ದಪಡಿಸಿದ್ದರು.