ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮೇಶ್ವರ ಉಚ್ಚಿಲ ಬೀಚ್ ರಸ್ತೆಯಲ್ಲಿ ಕಡಲ್ಕೊರೆತ:ಜನಪ್ರತಿನಿಧಿಗಳ ನಿರ್ಲಕ್ಷ್ಯ: ಅಸಮಾಧಾನ

Last Updated 4 ಜುಲೈ 2012, 9:20 IST
ಅಕ್ಷರ ಗಾತ್ರ

ಉಳ್ಳಾಲ: ಇಲ್ಲಿಗೆ ಸಮೀಪದ ಸೋಮೇಶ್ವರ ಪಂಚಾಯಿತಿ ವ್ಯಾಪ್ತಿಗೊಳಪಡುವ ಉಚ್ಚಿಲ ಬೀಚ್ ರಸ್ತೆ ನಿವಾಸಿಗಳು ಕಳೆದ ಎರಡು ವರ್ಷಗಳಿಂದ ಕಡಲ್ಕೊರೆತದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ವರ್ತಿಸುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

40ಕ್ಕೂ ಹೆಚ್ಚು ಮನೆಗಳಿರುವ ಉಚ್ಚಿಲ ಬೀಚ್ ರಸ್ತೆಯಲ್ಲಿ ಸಮುದ್ರದ ನೀರು ಸುಮಾರು 70 ಮೀಟರ್‌ನಷ್ಟು ಎದುರು ಬಂದು 10 ಮನೆಗಳ ಆವರಣ ಗೋಡೆಗಳಿಗೆ ಹಾನಿಯುಂಟು ಮಾಡಿದೆ. ಹಲವು ಗೆಸ್ಟ್ ಹೌಸ್‌ಗಳು ಸಮುದ್ರ ಪಾಲಾಗಿವೆ. ಕಳೆದ ವರ್ಷ ಮಳೆ ಆರಂಭವಾಗಿ ಎರಡು ತಿಂಗಳ ಬಳಿಕ  ಕಡಲ್ಕೊರೆತ ತೀವ್ರಗೊಂಡು ಹಾನಿ ಸಂಭವಿಸಿತ್ತು. ಆದರೆ ಈ ಬಾರಿ ಮಳೆ ಆರಂಭವಾದ ಕೆಲವೇ ದಿನಗಳಲ್ಲಿ ಸಮುದ್ರದ ಅಲೆಗಳು ಮನೆಗಳ ಗೋಡೆಗಳಿಗೆ ಅಪ್ಪಳಿಸಲು ಆರಂಭಿಸಿವೆ. ಕಳೆದ ವರ್ಷ ಭಾಗಶಃ ತಡೆಗೋಡೆಗಳು  ಸಮುದ್ರ ಪಾಲಾಗಿದ್ದರೆ, ಈ ಬಾರಿ  ತಡೆಗೋಡೆಗಳೊಂದಿಗೆ ಹಲವು ತೆಂಗಿನಮರಗಳು ಸಮುದ್ರ ಪಾಲಾಗಿವೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಉಚ್ಚಿಲ ಬೀಚ್ ರಸ್ತೆಯಿಂದ ತಲಪಾಡಿ ಅಳಿವೆಬಾಗಿಲುವರೆಗೆ ಕಡಲ್ಕೊರೆತ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಕೇವಲ ಉಳ್ಳಾಲ ಪ್ರದೇಶಕ್ಕೆ ಮಾತ್ರ ಭೇಟಿ ನೀಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಸ್ಥಳೀಯ ನಾಗರಿಕರ ದೂರು.

ಶಾಸಕ ಯು.ಟಿ.ಖಾದರ್ ಅವರಿಗೆ ಇಲ್ಲಿನ ನಿವಾಸಿಗಳು ದೂರು ನೀಡಿದ ಮರುದಿನವೇ ಸ್ಥಳಕ್ಕೆ ಆಗಮಿಸಿ  ಪರಿಶೀಲನೆ ನಡೆಸಿದರು. ಆದರೆ, ಚುನಾವಣೆ ಪ್ರಚಾರದ ವೇಳೆ ಇಲ್ಲಿಗಾಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಕಡಲ್ಕೊರೆತದ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಸರಿಯಾಗಿ ಸ್ಪಂದಿಸಲೇ ಇಲ್ಲ. ಅಲ್ಲದೆ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT