ರಾಮನಗರ: ಈಗಾಗಲೇ ರಾಷ್ಟ್ರೀಯ ಹೆದ್ದಾರಿ 48(ಬೆಂಗಳೂರು–ಮಂಗಳೂರು), ಧಾಬೂಲ್– ಬಿಡದಿವರೆಗಿನ ‘ಗೈಲ್’ ಗ್ಯಾಸ್ ಪೈಲ್ ಲೈನ್ ಮಾರ್ಗ, ನೆಲಮಂಗಲ– ಹಾಸನ ರೈಲು ಮಾರ್ಗ ನಿರ್ಮಾಣಕ್ಕೆ ತಮ್ಮ ಸಾವಿರಾರು ಹೆಕ್ಟೇರ್ ಭೂಮಿಯನ್ನು ಕಳೆದುಕೊಂಡು ಕಂಗಾಲಾಗಿರುವ ಮಾಗಡಿ ತಾಲ್ಲೂಕಿನ ತಿಪ್ಪ ಸಂದ್ರ, ಸೋಲೂರು, ಕುದೂರು ಹೋಬಳಿ ವ್ಯಾಪಿ್ತಯ ವಿವಿಧ ಗ್ರಾಮಗಳ ರೈತರಿಗೆ ಹಿಂದೂಸ್ತಾನ್ ಪೆಟ್ರೋ ಲಿಯಂ ಕಾರ್ಪೊ ರೇಷನ್ ಲಿಮಿಟೆಡ್ (ಎಚ್ಪಿಸಿಎಲ್)ನ ಎಲ್.ಪಿ.ಜಿ ಪೈಪ್ ಲೈನ್ ಯೋಜನೆ ಆತಂಕ ಕ್ಕೊಳಪಡುವಂತೆ ಮಾಡಿದೆ.
ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಯನ್ನು ಕಳೆದುಕೊಂಡು, ಕೃಷಿಯಿಂದಲೇ ವಿಮುಕರಾಗುವ ಸ್ಥಿತಿ ಈ ಭಾಗದ ರೈತರಿಗೆ ಬಂದೆರಗಿದೆ. ಅಭಿವೃದ್ಧಿ ಕೆಲಸಗಳಿಂದ ಇಲ್ಲಿನ ಭೂಮಿಯ ಬೆಲೆ ಏರಿಕೆಯಾಗುವುದರ ಬದಲಿಗೆ ಇಳಿಕೆ ಆಗುತ್ತಿದೆ ಎಂಬುದು ಈ ಭಾಗದ ರೈತರು ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
ಇದೀಗ ರೈತರನ್ನು ಬೆಚ್ಚಿ ಬೀಳಿಸುವಂತೆ ಮಾಡಿರುವುದು ಎಚ್ಪಿಸಿಎಲ್ನ ಮಂಗ ಳೂರು–ಹಾಸನ–ಮೈಸೂರು– ಸೋಲೂರು (ಎಂಎಚ್ಎಂಎಸ್) ಎಲ್.ಪಿ.ಜಿ ಪೈಪ್ಲೈನ್ ಯೋಜನೆ. ಮಂಗಳೂರಿನಿಂದ ಹಾಸನದವರೆಗೆ ಬರುವ ಈ ಪೈಪ್ಲೈನ್ ಮಾರ್ಗ ಅಲ್ಲಿ ವಿಭಜನೆಯಾಗಿ, ಅದರಲ್ಲಿ ಒಂದು ಮಾರ್ಗ ಮೈಸೂರಿನಲ್ಲಿ ನಿರ್ಮಾಣವಾಗುವ ಟರ್ಮಿನಲ್ ಗೆ ಸಾಗುತ್ತದೆ. ಇನ್ನೊಂದು ಮಾರ್ಗ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ನಿರ್ಮಾಣ ವಾಗಲಿರುವ ಟರ್ಮಿನಲ್ಗೆ ಬರುತ್ತದೆ.
ಈ ಯೋಜನೆಗೆ ತಮ್ಮ ಜಮೀನು ಸ್ವಾಧೀನ ವಾದರೆ ಹೇಗೆ ಎಂಬ ಆತಂಕದಲ್ಲಿ ರೈತರಿದ್ದಾರೆ. ಜಮೀನಿನ ಮಧ್ಯ ಗ್ಯಾಸ್ ಪೈಪ್ ಲೈನ್ ಹಾದು ಹೋದರೆ ಜಮೀನಿನ ಬೆಲೆ ಇಳಿಕೆಯಾಗುತ್ತದೆ ಎಂಬ ಕಳವಳ ರೈತರಲ್ಲಿದೆ.
ಈಗಾಗಲೇ ಮಂಗಳೂರಿನಿಂದ ಹಾಸನ, ಹಾಸನದಿಂದ ಮೈಸೂರು ಹಾಗೂ ಹಾಸನದಿಂದ ಯಡಿಯೂರುವರೆಗೂ ಕೆಲಸ ಸಾಗುತ್ತಿದ್ದು, ಯಡಿಯೂರಿನಿಂದ ಸೋಲೂರುವರೆಗಿನ 39.87 ಕಿ.ಮೀ ಉದ್ದದಲ್ಲಿ 14 ಗ್ರಾಮಗಳಲ್ಲಿ 66.24 ಎಕರೆ (693 ಖಾತೆದಾರರು) ಜಮೀನು ಭೂಸ್ವಾಧೀನ ಆಗಬೇಕಿದೆ. ಈ ಸಂಬಂಧ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನಿಗದಿಪಡಿ ಸುವಂತೆ ಎಚ್ಪಿಸಿಎಲ್ ರಾಮನಗರ ಜಿಲ್ಲಾ ಡಳಿತವನ್ನು ಕೋರಿದೆ. ಇದು ರೈತರನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.
ಯಾವ ಗ್ರಾಮಗಳು ?: ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ದೊಡ್ಡ ಮುದಿಗೆರೆ, ತಾಳೆಕೆರೆ, ಅಂಗಜನಹಳ್ಳಿ, ಮಾಚೋಹಳ್ಳಿ, ಕೆಂಪಾಪುರ, ಮಲ್ಲಸಂದ್ರ; ಕುದೂರು ಹೋಬಳಿಯ ಸೂರಪ್ಪನಹಳ್ಳಿ, ನಾರಸಂದ್ರ, ಮಣ್ಣಿಗನಹಳ್ಳಿ, ದುಮ್ಮನಕಟ್ಟೆ, ಕೆಂಪೋನಹಳ್ಳಿ, ಮಾದಗೊಂಡ ನಹಳ್ಳಿ; ಸೋಲೂರು ಹೋಬಳಿಯ ಕಲ್ಯಾಣಪುರ, ಸೋಲೂರು ಗ್ರಾಮಗಳಲ್ಲಿ ಈ ಪೈಪ್ಲೈನ್ ಬರಲಿದೆ.
ಈ ಪೈಪ್ ಲೈನ್ಗೆ 18 ಮೀಟರ್ ಅಗಲ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಈ ಸಂಬಂಧ ಈಗಾಗಲೇ ಗ್ರಾಮಗಳ ನಕಾಶೆ, ಪೈಪ್ ಲೈನ್ ಸಾಗಬೇಕಾದ ಮಾರ್ಗದ ಸಮೀಕ್ಷೆ, ಭೂ ದಾಖಲಾತಿಗಳ ಸಂಗ್ರಹ ಆಗಿದೆ ಅಲ್ಲದೆ ಕೇಂದ್ರ ಸರ್ಕಾರದ ಗೆಜೆಟ್ನಲ್ಲಿ 3(1) ನೋಟಿಫಿಕೇಷನ್ ಮಾಡಿ, ನೋಟಿಸ್ ನೀಡ ಲಾಗಿದೆ. ಅಲ್ಲದೆ ಗೆಜೆಟ್ನಲ್ಲಿ 6(1) ನೋಟಿ ಫಿಕೇಷನ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಎಚ್ಪಿಸಿಎಲ್ ಅಧಿಕಾರಿ ಗಳು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.
ಪೂರ್ವಭಾವಿ ಸಭೆ: ಈ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಭೂ ಪರಿಹಾರ ನಿಗದಿಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದ ಎಚ್ಪಿಸಿಎಲ್ ಪ್ರತಿನಿಧಿಗಳು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರ ಜತೆ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಯೋಜನೆಯ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ ಮಾತನಾಡಿ, ’ಕುದೂರು, ತಿಪ್ಪಸಂದ್ರ, ಸೋಲೂರು ಭಾಗದಲ್ಲಿ ರೈತರು ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಭೂಮಿ ಕಳೆದು ಕೊಂಡಿದ್ದಾರೆ. ಈ ಯೋಜನೆಗೂ ಭೂಮಿ ಕಳೆದುಕೊಳ್ಳಬೇಕಾಗಿ ಬಂದರೆ ರೈತರು ಹೆಚ್ಚು ಆಕ್ರೋಶ ಮತ್ತು ಅಸಮಾಧಾನಗೊಳ್ಳುತ್ತಾರೆ’ ಎಂದು ತಿಳಿಸಿದರು.
‘ಗ್ಯಾಸ್ ಪೈಪ್ಲೈನ್ಗಳು ಜಮೀನಿನ ಮಧ್ಯ ಹಾದು ಹೋಗುವುದರಿಂದ ಜಮೀನು ಇಬ್ಬಾಗ ವಾಗುತ್ತದೆ. ಗ್ಯಾಸ್ ಪೈಪ್ಲೈನ್ ಹಾದು ಹೋಗುವ ಜಮೀನಿಗೆ ಬೇಡಿಕೆಯೂ ಕಡಿಮೆಯಾಗಿ ಮಾರಾಟ ಮಾಡುವುದು ರೈತರಿಗೆ ಕಷ್ಟವಾಗುತ್ತದೆ’ ಎಂದು ಡಿ.ಸಿ ಹೇಳಿದರು.
ಈ ಯೋಜನೆಯಲ್ಲಿ ಕೆಲ ಮಾರ್ಪಾಡು ಮಾಡಿಕೊಳ್ಳುವಂತೆ ಅವರು ಎಚ್ಪಿಸಿಎಲ್ ಪ್ರತಿನಿಧಿಗಳಿಗೆ ಸೂಚಿಸಿದರು.
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ (48) ಹಾದು ಹೋಗಲಿದ್ದು, ಅದರ ಬದಿಯಲ್ಲಿ ಜಮೀನು ಸ್ವಾಧೀನ ಪಡಿಸಿಕೊಂಡು ಎಲ್ಪಿಜಿ ಪೈಪ್ ಲೈನ್ ಅಳವಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ ಈ ಸಂಬಂಧ ಹೊಸದಾಗಿ (ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬರುವಂತೆ) ಮಾರ್ಗ ಸಮೀಕ್ಷೆ ಸಿದ್ಧಪಡಿಸಿ ಕೊಂಡು ಬರುವಂತೆ ಅವರು ಸೂಚಿಸಿದರು.
ಹೊಸ ಮಾರ್ಗದ ನಕಾಶೆ ಸಿದ್ಧಪಡಿಸಿದ ನಂತರ ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ನೇತೃತ್ವದಲ್ಲಿ ಆ ಭಾಗದ ರೈತರ ಜತೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯ ಪಡೆಯುವಂತೆ ಜಿಲ್ಲಾಧಿಕಾರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.