ನವದೆಹಲಿ (ಪಿಟಿಐ): ದೇಶದ 78 ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಕ್ಕಾಗಿ ಸೌರಶಕ್ತಿ ಆಧಾರಿತ 10,000 ನೀರು ಸರಬರಾಜು ವ್ಯವಸ್ಥೆ ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
`ಗ್ರಾಮೀಣ ಪ್ರದೇಶದಲ್ಲಿರುವ ಜನ ಸಮುದಾಯಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸೌರಶಕ್ತಿ ಆಧಾರಿತವಾದ 10,000 ನೀರು ಸರಬರಾಜು ವ್ಯವಸ್ಥೆ ಸ್ಥಾಪಿಸುವ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ~ ಎಂದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಸೋಮವಾರ ಹೇಳಿದರು.
`ಈ ಮಹತ್ವಾಕಾಂಕ್ಷೆ ಯೋಜನೆಗೆ ಒಟ್ಟು 540 ಕೋಟಿ ರೂಪಾಯಿ ವೆಚ್ಚವಾಗಲಿದೆ. ನಮ್ಮಲ್ಲಿ ಸಾಕಷ್ಟು ಹಣವಿದ್ದು, ಯೋಜನೆಗೆ ಹಣದ ಕೊರತೆ ಎದುರಾಗದು~ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಮತ್ತು ನವೀಕರಿಸಬಹುದಾದ ಶಕ್ತಿಯ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸಚಿವರು ಹೇಳಿದರು.
`ಇದೇ ಮೊದಲ ಬಾರಿಗೆ ಇಂತಹ ಯೋಜನೆಯನ್ನು ನಾವು ಕೈಗೆತ್ತಿಕೊಂಡಿದ್ದೇವೆ. ವಿವಿಧ ಕಾರಣಗಳಿಗಾಗಿ ಇನ್ನೂ ವಿದ್ಯುತ್ ವ್ಯವಸ್ಥೆ ತಲುಪಲು ಸಾಧ್ಯವಾಗಿರದ ಗ್ರಾಮೀಣ ಭಾಗಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆ ಕುರಿತಾದ ಜಾಗೃತಿಯನ್ನೂ ಈ ಯೋಜನೆ ಮಾಡಲಿದೆ~ ಎಂದರು.
`ಜರ್ಮನ್ ತಂತ್ರಜ್ಞಾನದಲ್ಲಿ ತಯಾರಿಸಿರುವ ಅಂತರ್ಜಲ ಮೇಲಕ್ಕೆತ್ತುವ ಪಂಪ್ ಹಾಗೂ ಪುಣೆಯಲ್ಲಿ ತಯಾರಿಸಿರುವ ಸೌರಶಕ್ತಿ ಫಲಕಗಳನ್ನು ಬಳಸಿ ಕಾರ್ಯ ನಿರ್ವಹಿಸುವ ಒಟ್ಟು 200 ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಈಗಾಗಲೇ ಮಹಾರಾಷ್ಟ್ರದ ನಕ್ಸಲ್ಪೀಡಿತ ಜಿಲ್ಲೆಯಾದ ಗಡ್ಚಿರೋಲಿಯಲ್ಲಿ ಸ್ಥಾಪಿಸಲಾಗಿದೆ~ ಎಂದು ಜೈರಾಮ್ ರಮೇಶ್ ತಿಳಿಸಿದರು.
`ದೇಶದ 78 ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ನಾವು ಜಾರಿಗೆ ತರಲಿದ್ದೇವೆ~ ಎಂದು ಸಚಿವರು ನುಡಿದರು.