ವಿಜಯಪುರ: ಇಲ್ಲಿಗೆ ಸಮೀಪದ ದಂಡಿಗಾನಹಳ್ಳಿಯಲ್ಲಿ ಪವರ್ಟ್ರಾನಿಕ್ಸ್ ಸಿಸ್ಟಮ್ಸ್ ಲಿಮಿಟೆಡ್ ನಿರ್ಮಾಣದ ಸೌರಶಕ್ತಿಯಿಂದ ನೀರು ಶುದ್ಧೀಕರಿಸುವ ಘಟಕವನ್ನು ಬುಧವಾರ ಉದ್ಘಾಟಿಸಲಾಯಿತು.
ಘಟಕ ಉದ್ಘಾಟಿಸಿದ ಕಂಪೆನಿಯ ತಾಂತ್ರಿಕ ಯೋಜನ ಅಧಿಕಾರಿ ಪ್ರೊ. ಎಂ.ವಿ.ಶಾಸ್ತ್ರಿ ಮಾತನಾಡಿ, ಅಂದಾಜು 10 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಈ ಘಟಕದಲ್ಲಿ ಪ್ಲೋರೈಡ್ ನೀರನ್ನು ಶುದ್ಧೀಕರಿಸಬಹುದು. ಒಂದು ಲೀಟರ್ ನೀರು ಶುದ್ಧೀಕರಿಸಲು ಒಂದು ಪೈಸೆಯಷ್ಟು ಹಣ ಖರ್ಚಾಗುತ್ತಿದೆ. ಸೌರಶಕ್ತಿ ಬಳಸುವುದರಿಂದ ನೀರು ಶುದ್ಧೀಕರಣದ ಖರ್ಚು ಕಡಿಮೆಯಾಗಿದೆ. ಈ ಪ್ರಯೋಗದ ಯಶಸ್ಸನ್ನು ಆಧರಿಸಿ ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಅವರು ವಿವರಿಸಿದರು.
ಮಳೆನೀರು ಸಂಗ್ರಹ, ನೈಸರ್ಗಿಕ ಪದ್ಧತಿಯಲ್ಲಿ ಶುದ್ಧೀಕರಣ, ರಾಸಾಯನಿಕಗಳ ಬಳಕೆಯಿಲ್ಲದೇ ಸೋಸುವಿಕೆಯಂತಹ ವೈಜ್ಞಾನಿಕ ಕ್ರಮಗಳನ್ನು ಈ ಘಟಕದಲ್ಲಿ ಅನುಸರಿಸಲಾಗುತ್ತಿದೆ. ಎಂ.ವಿ.ಎಸ್ ಮತ್ತು ಯು.ಎಸ್.ಎಲ್.ಎಂ.ವಿ.ಎಸ್ ವಿಧಾನಗಳೆರಡರ ಮೂಲಕ ವಿದ್ಯುತ್ ನಿರ್ವಹಣೆಯಿಲ್ಲದೇ ಸುಮಾರು 1000 ಲೀ. ನೀರನ್ನು ಸಂಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಎಸ್.ರಮೇಶ್, ಲಕ್ಷ್ಮಿಶಾ, ಪಂಚಾಯತ್ರಾಜ್ ಇಲಾಖೆಯ ಇಂಜಿನಿಯರ್ ಸುಬಾನ್ಸಾಬ್, ದಂಡಿಗಾನಹಳ್ಳಿ ಗ್ರಾಮದ ಜನ ಪ್ರತಿನಿಧಿಗಳು, ಗ್ರಾಮಸ್ಥರು ಹಾಜರಿದ್ದರು.