ಮೂಡಿಗೆರೆ: ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿರುವಂತೆಯೇ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ತಮಗೂ ನೀಡಬೇಕು ಎಂದು ಆಗ್ರಹಿಸಿ ಗೋಣಿಬೀಡಿನ ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆ ಮತ್ತು ಇಂಚರ ಒಕ್ಕೂಟ ಆಶ್ರಯದಲ್ಲಿ ತಾಲ್ಲೂಕಿನ ವಿವಿಧ ಸ್ವಸಹಾಯ ಸಂಘಗಳ ಸದಸ್ಯೆಯರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ 825 ಮಹಿಳಾ ಸ್ವಸಹಾಯ ಸಂಘಗಳಲ್ಲಿ 13,265 ಬಡ ಮಹಿಳೆಯರು ಸ್ವಸಹಾಯ ಸಂಘ ಸ್ಥಾಪಿಸಿ, ಅಭಿವೃದ್ಧಿ ಚಟುವಟಿಕೆ ನಡೆಸುತ್ತಿದ್ದಾರೆ. ಸರ್ಕಾರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಮಾತ್ರ ಸಬ್ಸಿಡಿ ಸೌಲಭ್ಯದ ಸಾಲ, ಸುತ್ತುನಿಧಿ ನೀಡುತ್ತಿದ್ದು, ಇತರೆ ಸಂಘಗಳತ್ತ ತಾರತಮ್ಯ ತೋರುತ್ತಿದೆ. ಎಂದು ಪ್ರತಿಭಟನಾಕಾರರು ದೂರಿದರು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಮಹಿಳಾ ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಶಿರಸ್ತೆದಾರ್ ಅಂಜನಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು. ಚಿಕ್ಕಮಗಳೂರು ವಿವಿಧೋದ್ದೇಶ ಸಮಾಜಸೇವಾ ಸಂಘ ಗೋಣಿಬೀಡು ಸಂಚಾಲಕಿ ಸಿಸ್ಟರ್ ಶೋಭಾ, ಇಂಚರ ಒಕ್ಕೂಟದ ಜೈನಬಿ, ರತ್ನ ಇತರರು ಪ್ರತಿಭಟನೆಯಲ್ಲಿದ್ದರು.