ಪಾಂಡವಪುರ: ದಲಿತರಿಗೆ ದಕ್ಕಬೇಕಾದ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಸರ್ಕಾರಿ ಆಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಹಳೆ ಎ.ಸಿ.ಆಫೀಸ್ ಬಳಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು `ದಲಿತರನ್ನು ಕಡೆಗಣಿಸಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ದಲಿತರಿಗೆ ಸವಲತ್ತುಗಳನ್ನು ಒದಗಿಸಿಕೊಡುವಲ್ಲಿ ವಿಫಲವಾಗಿರುವ ಅಧಿಕಾರಿಗಳಿಗೆ ಧಿಕ್ಕಾರ~ ಎಂಬು ಘೋಷಣೆ ಕೂಗುತ್ತ ಡಾ.ರಾಜ್ಕುಮಾರ್ ವೃತ್ತ ತಲುಪಿ ಮಾನವ ಸರಪಳಿ ರಚಿಸಿದರಲ್ಲದೆ ಕೆಲವು ಕಾಲ ರಸ್ತೆತಡೆ ನಡೆಸಿದರು.
ನಂತರ ಮಿನಿವಿಧಾನಸೌಧಕ್ಕೆ ತೆರಳಿದ ಪ್ರತಿಭಟ ನಾಕಾರರು ತಾಲ್ಲೂಕು ಕಚೇರಿಯನ್ನು ಮುತ್ತಿಗೆ ಹಾಕಿದರು. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಸಕಾಲದಲ್ಲಿ ಅನುಷ್ಠಾನವಾಗದೆಯಿರುವುದರಿಂದ ದಲಿತರ ಅಭಿವೃದ್ದಿ ಕುಂಠಿತಗೊಂಡಿವೆ. ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ನೀರಿನ ಕೊಳವೆ ಬಾವಿಗಳನ್ನು ಕೊರೆಸಿದರೂ ಸರಬರಾಜಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿಲ್ಲ.
ಹೊಸಕೋಟೆ ಗ್ರಾಮದ ಸ.ನಂ.143ರಲ್ಲಿ 9 ಜನ ದಲಿತರಿಗೆ ಭೂಮಿ ಮಂಜೂರಾತಿಯಾಗಿದ್ದರೂ ಅಳತೆ ಮಾಡಿಸಿ ಅವರಿಗೆ ಸಾಗುವಳಿ ಮಾಡಲು ಅವಕಾಶಮಾಡಿಕೊಟ್ಟಿಲ್ಲ. ದಲಿತರಿಗೆ ಸ್ಮಶಾನ ಜಾಗವನ್ನು ಕಲ್ಪಸಿಕೊಟ್ಟಿಲ್ಲ. ದಲಿತ ಕೇರಿಗಳ ಸಮಗ್ರ ಅಭಿವೃದ್ದಿಗೆ ಕೈಗೊಳ್ಳದೆಯಿರುವುದರಿಂದ ಕೇರಿಗಳ ಚರಂಡಿ, ರಸ್ತೆ, ನೀರಿನ ಸೌಲಭ್ಯ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ.
ದರಖಾಸ್ತು ಭೂಮಿಗಾಗಿ ಅರ್ಜಿಸಲ್ಲಿಸಿರುವ ಬಡವರಿಗೆ ಭೂಮಿ ನೀಡಿಲ್ಲ. ಪಡಿತರ ಚೀಟಿ ಹಾಗೂ ವಿಧವಾ ವೇತನ, ವೃದ್ದಪ್ಯಾವೇತನವನ್ನು ಅರ್ಹಫಲಾನುಭವಿಗಳಿಗೆ ನೀಡಿಲ್ಲ ಎಂದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಸಂಘಟನೆಯ ಮುಖಂಡ ಎಂ.ಬಿ.ಶ್ರೀನಿವಾಸ್, ಜಿಲ್ಲಾ ಸಂಚಾಲಕ ಎಂ.ನಾಗರಾಜಯ್ಯ, ಜಿ.ಸಂ.ಸಂಚಾಲಕ ಎಂ.ವಿ.ಕೃಷ್ಣ, ಮಹಿಳಾ ಸಂಚಾಲಕಿ ಎಂ.ಎನ್.ಭಾರತಿ, ಉಪ ವಿಭಾಗ ಸಂಚಾಲಕ ಸಣಬಶಿವಣ್ಣ, ಜಿ. ಖಜಾಂಚಿ ಹೊಸೂರುಸ್ವಾಮಿ, ತಾಲ್ಲೂಕು ಸಂಚಾಲಕ ದೇವೇಗೌಡನಕೊಪ್ಪಲು ದೇವರಾಜು, ತಾ.ಸಂ.ಸ ಎಚ್.ಪಿ.ಜವರಯ್ಯ, ಎ.ಜಿ.ಶಿವಸ್ವಾಮಿ, ಎಂ.ಎ.ರವೀಂದ್ರ, ಭಾನುಮತಿ ತಾಳೆಕೆರೆ, ಸೈಮನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.