ಹಾಸನ: `ಸರ್ಕಾರ ಹೆಣ್ಣು ಮಕ್ಕಳಿಗೆ ನೀಡಿರುವ ಸೌಲಭ್ಯವನ್ನು ಬಳಸಿಕೊಂಡು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು' ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಭಾಗ್ಯಲಕ್ಷ್ಮಿ ಸಲಹೆ ನೀಡಿದರು.
ನಗರದ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ಈಚಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಣ್ಣು ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವು ಯೋಜನೆಗಳನ್ನು ರೂಪಿಸಿವೆ. ಇದರ ಲಾಭ ಪಡೆದು ಯುವತಿಯರು ಐ.ಎ.ಎಸ್/ ಐ.ಪಿ.ಎಸ್. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಉನ್ನತ ಮಟ್ಟಕ್ಕೆ ಏರಬೇಕು' ಎಂದರು.
ಮುಖ್ಯ ಅತಿಥಿಯಾಗಿದ್ದ ಆದಾಯ ತೆರಿಗೆ ಇಲಾಖೆಯ ಹಾಸನ ವಿಭಾಗದ ಉಪ ಆಯುಕ್ತೆ ನಂದಿನಿ ದಾಸ್, `ಸಮಾಜದಲ್ಲಿ ಶಿಕ್ಷಕರ ಬಗ್ಗೆ ಉನ್ನತ ಗೌರವ ಇದೆ. ಭವಿಷ್ಯದ ಪ್ರಜೆಗಳನ್ನು ನಿರ್ಮಿಸುವಲ್ಲಿ ಅವರ ಪಾತ್ರ ಮಹತ್ವದ್ದು' ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ಜಿ.ಎಲ್. ಮುದ್ದೆೀ ಗೌಡ `ಹೆಣ್ಣು ಮಕ್ಕಳು ಯಾವುದೇ ವೃತ್ತಿಗೆ ಇಳಿಯಲು ಹಿಂಜರಿಯಬಾರದು, ಆತ್ಮವಿಶ್ವಾಸದಿಂದ ಬದುಕುವ ದಾರಿ ಗಳನ್ನು ಕಂಡುಕೊಳ್ಳಬೇಕು' ಎಂದು ಸಲಹೆ ನೀಡಿದರು. ಪ್ರಾಚಾರ್ಯೆ ಡಾ.ಜೆ. ಶೈಲಜಕುಮಾರಿ ಹಾಗೂ ಕಾಲೇಜಿನ ಅಧ್ಯಾಪಕರು ಹಾಜರಿದ್ದರು.