ಹಿಂದು ಸಂಸ್ಕೃತಿ, ವೇದ ಉಪನಿಷತ್ತುಗಳಲ್ಲಿ ಸ್ತ್ರೀಗೆ ದೇವಿಯ ಸ್ಥಾನ. ಹಾಗೆಯೇ ಬಹುತೇಕ ಕಲಾವಿದರಿಗೆ ಮಹಿಳೆ ಶಕ್ತಿ, ಸಂಯಮ ಕುತೂಹಲದ ವಸ್ತು.
ಧಾರವಾಡದ ಹಿರಿಯ ಕಲಾವಿದ ಎನ್.ಕೆ. ಹಳಕೇರಿ ಅವರ ಕಲಾಕೃತಿಗಳು ಮಹಿಳೆಯ ಜೀವನದ ಸುತ್ತ ಹೆಣೆದಿರುವಂತವು. ಅವರ ಕುಂಚದ ಮೂಸೆಯಲ್ಲಿ ಅರಳಿದ ಚಿತ್ತಾಕರ್ಷಕ ಚಿತ್ರಗಳಲ್ಲಿ ಬಹುತೇಕ ಗ್ರಾಮೀಣ ಭಾಗದ ಮಹಿಳೆಯರೇ ಕಾಣುತ್ತಾರೆ.
ಹಳಕೇರಿಯವರ ಕಲಾಕೃತಿಗಳ ಪ್ರದರ್ಶನ ಈಗ ಚಿತ್ರಕಲಾ ಪರಿಷತ್ನಲ್ಲಿ ನಡೆಯುತ್ತಿದೆ. ನಿಸರ್ಗ ಮತ್ತು ಪ್ರೀತಿ, ಸ್ವಾವಲಂಬಿ ಮಹಿಳೆ, ಶಾಕುಂತಲೆ ನೀರಿಗೆ ಬಂದಾಗ ದುಶ್ಯಂತನಿಗಾಗಿ ಕಾಯುವ ರೀತಿ ಹಾಗೂ ರಾಧಾ ಕೃಷ್ಣರ ಸರಸದ ಕ್ಷಣಗಳ ರೇಖಾ ಚಿತ್ರಗಳು ಎಂಥವರನ್ನೂ ಮೂಕ ವಿಸ್ಮಿತರಾಗಿಸುತ್ತದೆ. ಶೃಂಗಾರ, ಪ್ರೀತಿ ಸೇರಿದಂತೆ ನವರಸಗಳನ್ನು ಮಿಶ್ರಣ ಮಾಡಿ ಎರಕ ಹೊಯ್ದಂತೆ ರಚಿತವಾಗಿರುವ ಸ್ತ್ರೀಯರ ವರ್ಣ ಚಿತ್ರಗಳು ಎಲ್ಲರಿಗೂ ಇಷ್ಟವಾಗುವಂತಿವೆ.
ಹಳಕೇರಿ ಉಗುರಿನ ಮೂಲಕ ಭಾವಚಿತ್ರ ಬಿಡಿಸುವ ನೈಪುಣ್ಯ ಹೊಂದಿದ್ದಾರೆ. ಪ್ರಕೃತಿ ಹಾಗೂ ರಾಷ್ಟ್ರ ನಾಯಕರ ರೇಖಾ ಚಿತ್ರಗಳನ್ನೂ ಕೇವಲ ಐದರಿಂದ ಹತ್ತು ನಿಮಿಷದಲ್ಲಿ ಬಿಡಿಸುತ್ತಾರೆ. ನಗರದಲ್ಲಿ ಮೂರನೇ ಬಾರಿ ಪ್ರದರ್ಶನಗೊಳ್ಳುತ್ತಿರುವ ಹಳಕೇರಿಯವರ ಚಿತ್ರಗಳಲ್ಲಿ ಗ್ರಾಮೀಣ ಪ್ರದೇಶದ ಬದುಕನ್ನು ಬಿಂಬಿಸುವ ವಸ್ತು ವಿಷಯವಿದೆ.
ಪ್ರದರ್ಶನ ಬುಧವಾರ ಮುಕ್ತಾಯ.
ಸ್ಥಳ: ಚಿತ್ರಕಲಾ ಪರಿಷತ್,
ಕುಮಾರಕೃಪಾ ರಸ್ತೆ