ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರಕ್ಕೆ ಕೋರ್ಟ್ ಅಣಿ; ನವನಗರಕ್ಕೆ ನ್ಯಾಯ

Last Updated 6 ಫೆಬ್ರುವರಿ 2012, 9:05 IST
ಅಕ್ಷರ ಗಾತ್ರ

ಬಾಗಲಕೋಟೆ: ನವನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಸಿದ್ಧವಾಗಿದೆ. ಇದರಿಂದ ನವನಗರದಲ್ಲಿ ಜನಸಂಚಾರ ಅಧಿಕವಾಗುವ ಮೂಲಕ ವ್ಯಾಪಾರ-ವಹಿವಾಟು ಹೆಚ್ಚಳವಾಗುವ ಆಶಯ ಗರಿಗೆದರಿದೆ.

ನವನಗರಕ್ಕೆ ಕೇವಲ ನ್ಯಾಯಾಲಯ ಮಾತ್ರ ಸ್ಥಳಾಂತರವಾಗದೇ ನ್ಯಾಯಾಲ ಯವನ್ನು ಅವಲಂಭಿಸಿರುವ ವಕೀಲರು, ಸಿಬ್ಬಂದಿ, ನ್ಯಾಯಾಧೀಶರು ಸೇರಿದಂತೆ ಪ್ರತಿನಿತ್ಯ ನ್ಯಾಯಲಯಕ್ಕೆ ಬರುವ ಸಾರ್ವಜನಿಕರು ನವನಗರದೊಂದಿಗೆ ಒಡನಾಟ ಹೊಂದುವುದರಿಂದ ಹೊಸ ಕಳೆ ಬರಲಿದೆ.

ಖಾನಾವಳಿ, ಕ್ಯಾಂಟೀನ್, ಪೆಟ್ಟಿಗೆ ಅಂಗಡಿ, ಕಂಪ್ಯೂಟರ್, ಝರಾಕ್ಸ್, ವಕೀಲರ ಕಚೇರಿಗಳು ತಲೆ ಎತ್ತುವು ದರಿಂದ ನವನಗರದಲ್ಲಿ ಜನಜಂಗಳಿ ಕಂಡುಬರಲಿದೆ. ಇದೇ ವೇಳೆ ಹಳೆ ಬಾಗಲಕೋಟೆ ಒತ್ತಡ ಮುಕ್ತ ವಾಗಲಿದೆ.

ನವನಗರದ ಸೆಕ್ಟರ್ ನಂ. 24ರಲ್ಲಿ 10 ಎಕರೆ ಪ್ರದೇಶದಲ್ಲಿ ಸುಂದರವಾಗಿ ನಿರ್ಮಾಣವಾಗಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನವನಗರದ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲಿದೆ. ಸಮೀಪದಲ್ಲೇ  ಜಿಲ್ಲಾಡಳಿತ ಭವನ ಮತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ನಗರಸಭೆ, ವಿವಿಧ ಬ್ಯಾಂಕುಗಳು ಇರುವುದರಿಂದ ನ್ಯಾಯಾಲಯಕ್ಕೆ ಬರುವವರಿಗೆ ಅನುಕೂಲವಾಗಲಿದೆ.

ಹಳೆ ಬಾಗಲಕೋಟೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಈಗಿರುವ ನ್ಯಾಯಲಯದ ಆವರಣ ದಲ್ಲಿ ಬ್ರಿಟಿಷರ ಆಡಳಿತಾವಧಿ 1887ರಲ್ಲಿ ಮುನ್ಸಿಫ್ ಕೋರ್ಟ್ ಪ್ರಥಮವಾಗಿ ಆರಂಭವಾಗಿತ್ತು, ಬಳಿಕ 1943ರಲ್ಲಿ ಸಿವಿಲ್ ಕೋರ್ಟ್ ತಲೆ ಎತ್ತಿತ್ತು. ಬಳಿಕ ಬಾಗಲಕೋಟೆ ಹೊಸ ಜಿಲ್ಲೆಯಾಗಿ ರೂಪುಗೊಂಡ ಬಳಿಕ 2001ಫೆಬ್ರುವರಿ 17ರಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕಾರ್ಯಾರಂಭ ಮಾಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಆಲಮಟ್ಟಿ ಜಲಾಶಯದ ಮುಳು ಗಡೆ ವ್ಯಾಪ್ತಿಯಲ್ಲಿ ಹಳೆ ನ್ಯಾಯಾಲಯ ಬರುವುದರಿಂದ ನ್ಯಾಯಾಲಯ ಸ್ಥಳಾಂತರ ಅನಿವಾರ್ಯವಾಗಿತ್ತು. ಇದನ್ನು ಮನಗಂಡು ಅಂದಿನ ಸರ್ಕಾರ 2002ರಲ್ಲಿ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಸರಾಸರಿ 10 ವರ್ಷಗಳಿಂದ ಹಂತಹಂತ ವಾಗಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಿಸಲಾಗಿದೆ.

ನವನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ, 2ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ, ಪ್ರಧಾನ ದಿವಾಣಿ ನ್ಯಾಯಾಲಯ ಮತ್ತು ಹೆಚ್ಚುವರಿ ದಿವಾಣಿ ನ್ಯಾಯಾಲಯ ಸೇರಿದಂತೆ ಒಟ್ಟು ಆರು ನ್ಯಾಯಾಲಯಗಳಿಗೆ ಪ್ರತ್ಯೇಕ ಕೋರ್ಟ್ ಹಾಲ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಸಾಕ್ಷಿದಾರರ (ವಿಟ್ನೆಸ್ ಹಾಲ್), ವಕೀಲರ ಕೊಠಡಿ ಸಹ ನಿರ್ಮಾಣವಾಗಿದೆ.

ನ್ಯಾಯಾಧೀಶರಿಗಾಗಿ ಎರಡು ವಸತಿ ಸಮುಚ್ಛಯ ಹಾಗೂ ಸಿಬ್ಬಂದಿಗಳಿಗಾಗಿ ಎರಡು ವಸತಿ ಸಮುಚ್ಛಯಗಳನ್ನು ನಿರ್ಮಿಸಲಾಗಿದ್ದು, ಈಗಾಗಲೇ ಉದ್ಘಾಟನೆಯಾಗಿವೆ. ನ್ಯಾಯಾಲಯದ ಸುತ್ತ ಕಂಪೌಡ್ ನಿರ್ಮಾಣ ಮಾಡ ಲಾಗಿದೆ. ಅಲ್ಲದೇ ಅಪರಾಧಿಗಳನ್ನು ಬಂಧಿಸಿಡಲು ಸೆಲ್‌ಗಳನ್ನು ಸಹ ನಿರ್ಮಿಸಲಾಗಿದೆ.


ಇನ್ನೂ ಜಿಲ್ಲಾ ವಕೀಲರ ಸಂಘದ ಕಚೇರಿ, ಇ-ಗ್ರಂಥಾಲಯ, ಕೋರ್ಟ್ ಕ್ಯಾಂಟೀನ್, ಉದ್ಯಾನವನ ನಿರ್ಮಾಣವಾಗುವ ಅಗತ್ಯವಿದೆ.

ಉದ್ಘಾಟನೆ: ಇದೇ 19ರಂದು ನಡೆಯುವ ನೂತನ ನ್ಯಾಯಾಲಯ ಸಂಕೀರ್ಣದ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್, ಕಾನೂನು ಸಚಿವ ಸುರೇಶ ಕುಮಾರ್ ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಗುಲ್ಬರ್ಗಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಶೋಕ ಬಿ.ಇಂಚಿಗೇರಿ  ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT