ದೇವದುರ್ಗ: ದೇಶದಲ್ಲಿಯೇ ಅಭಿವೃದ್ಧಿಯಿಂದ ಹಿಂದುಳಿದಿರುವ ದೇವದುರ್ಗ ತಾಲ್ಲೂಕಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದರೂ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಕಷ್ಟು ಕಾಮಗಾರಿಗಳು ನೆನಗುದಿಗೆ ಬಿದ್ದಿವೆ.
ಸದರಿ ವಿಷಯ ಸದನದಲ್ಲಿ ಎತ್ತಲು ಮುಜುಗುರಕ್ಕೆ ಕಾರಣ ಆಡಳಿತ ಪಕ್ಷದ ಶಾಸಕರಾಗಿರುವುದರಿಂದ ಎಂದು ಶಾಸಕ ಕೆ. ಶಿವನಗೌಡ ನಾಯಕ ಆರೋಪಿಸಿದರು.ಶುಕ್ರವಾರ ಪಟ್ಟಣದ ಶಾಸಕರ ಭವನದಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯವಾಗಿ ಭೂ ಸೇನಾ ಮತ್ತು ನಿರ್ಮಿತಿ ಕೇಂದ್ರಗಳ ಅಡಿಯಲ್ಲಿ ನಡೆಯುವ ಸಾಕಷ್ಟು ಕಾಮಗಾರಿಗಳು ಮುಗಿಯದೆ ಇರುವುದು ಮತ್ತು ಕೆಲವು ಗ್ರಾಮಗಳಲ್ಲಿ ಆರು ವರ್ಷಗಳು ಕಳೆದರೂ ಕಾಮಗಾರಿ ಮುಗಿದಿಲ್ಲ. ಕಷ್ಟಪಟ್ಟು ಅನುದಾನ ಮಂಜೂರು ಮಾಡಿಸಿಕೊಂಡು ಬಂದರೂ ಸ್ಥಳೀಯವಾಗಿ ಅದನ್ನು ಸರಿಯಾಗಿ ಉಪಯೋಗ ಪಡಿಸಿಕೊಳ್ಳದೆ ಸಾಕಷ್ಟು ಕಾಮಗಾರಿ ನೆನಗುದಿಗೆ ಬೀಳಲು ಕೆಲವು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.
ಧರಣಿ: ಜಿಲ್ಲಾ ಪಂಚಾಯಿತಿ ಅನುದಾನಕ್ಕೆ ಸಂಬಂಧಿಸಿದಂತೆ ಕೆಲವುಕಡೆ ಇಲಾಖೆಯ ಕಿರಿಯ ಎಂಜಿನಿಯರ್ ಅವರು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಕೇಳಿದವರಿಗೆಲ್ಲ ಬಿಲ್ ಬರೆದುಕೊಡಲು ಸಂಚು ನಡೆದಿರುವುದು ತಿಳಿದು ಬಂದಿದ್ದು, ಆ ರೀತಿ ನಡೆದಿರುವುದು ಕಂಡು ಬಂದರೆ ನಿಮ್ಮ ಕಚೇರಿ ಮುಂದೆಯೇ ಧರಣಿ ನಡಸಲಾಗುವುದು ಎಂದು ಶಾಸಕರು ಸಭೆಯಲ್ಲಿ ಭಾಗಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ ಕುಮಾರ ಜೈನ್ ಅವರಿಗೆ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮನೋಜಕುಮಾರ ಜೈನ್ ಅವರು ಆ ರೀತಿ ಆಗದಂತೆ ನಿಗಾವಹಿಸಲಾಗುವುದು ಎಂದು ಶಾಸಕರಿಗೆ ಭರವಸೆ ನೀಡಿದರು.
ಕಮೀಷನ್: ಬಸವ ಆಶ್ರಯ ಸೇರಿದಂತೆ ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ ತಾಲ್ಲೂಕಿಗೆ ಮಂಜೂರಾದ ಮನೆಗಳ ಬಗ್ಗೆ ಈಗಾಗಲೇ ಮೊದಲ ಕಂತಿನ15 ಸಾವಿರ ರೂಪಾಯಿ ಫಲಾನುಭವಿಗಳಿಗೆ ಪಾವತಿಸಿಲು ಸೂಚಿಸಲಾಗಿದ್ದರೂ ಕೆಲವು ಗ್ರಾಪಂಯಲ್ಲಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಫಲಾನುಭವಿಗಳಿಂದ ಕಮಿಷನ್ ಕೇಳುತ್ತಿರುವುದು ಕಂಡು ಬಂದಿದೆ.
ಉದಾಹರಣೆ ಶಾವಂತಗೇರಾದಲ್ಲಿ ಅಧ್ಯಕ್ಷರು ಫಲಾನುಭವಿಗಳಿಂದ ಸುಮಾರು ಐದು ಸಾವಿರ ರೂಪಾಯಿ ಕಮಿಷನ್ ಕೇಳುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಅಂತವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಶಾಸಕರು ಸಿಒ ಅವರಿಗೆ ಮನವಿ ಮಾಡಿದಾಗ ಅದಕ್ಕೆ ಉತ್ತರಿಸಿದ ಸಿಒ ಅವರು ಕೂಡಲೇ ಪಿಡಿಒ ಮತ್ತು ಅಧ್ಯಕ್ಷರ ಸಭೆ ಕರೆದು ಯಾರಿಂದಲೂ ಹಣ ಕೇಳದಂತೆ ತಾಕೀತು ಮಾಡಲು ತಾಪಂ ಇಒ ನಾಮದೇವ ರಾಠೋಡ್ ಅವರಿಗೆ ಸೂಚಿಸಿದರು.
ಬೆಲೆ ಇಲ್ಲ: ಮಲ್ದಕಲ್, ಗಾಣಾಧಾಳ ಮತ್ತು ಕ್ಯಾದಿಗೇರಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ರಾಜರೋಷವಾಗಿ ಹಣ ದುರಬಳಕೆಯಲ್ಲಿ ಮಗ್ನರಾಗಿದ್ದಾರೆ. ಕ್ಯಾದಿಗೇರಾ ಪಿಡಿಒ ಅವರು ಶಾಸಕರಿಗೆ ಬೆಲೆ ಇಲ್ಲದಂಥೆ ನಡೆದುಕೊಂಡಿರುವುದರಿಂದ ಕೂಡಲೇ ಶಿಸ್ತುಕ್ರಮ ಜರುಗಿಸಬೇಕೆಂದು ಸಿಒ ಅವರಿಗೆ ಹೇಳಿದಾಗ ಕೂಡಲೇ ತನಿಖೆ ಕೈಗೊಂಡು ವರದಿ ಸಲ್ಲಿಸಲು ಇಒ ಅವರಿಗೆ ಸೂಚಿಸಿದರು.
ತಾರತಮ್ಯ: ಈಚೆಗೆ ಗ್ರಾಪಂ ಕಾರ್ಯದರ್ಶಿಗಳ ವರ್ಗಾವಣೆ ವಿಷಯದಲ್ಲಿ ದೇವದುರ್ಗಕ್ಕೆ ತಾರತಮ್ಯ ನೀತಿ ಅನುಸರಿಸಿರುವ ನೀತಿ ಸರಿಯಲ್ಲ ಎಂದು ಶಾಸಕರು ಸಿಒ ಮತ್ತು ಡಿಎಸ್ ಅವರಿಗೆ ನೇರವಾಗಿ ಹೇಳಿದರು. ನನ್ನ ತಾಲ್ಲೂಕಿಗೆ ಅನ್ಯಾಯವಾಗಿದ್ದು, ಕೂಡಲೇ ಖಾಲಿ ಇರುವ ಸ್ಥಾನಗಳಿಗೆ ಭರ್ತಿ ಮಾಡಬೇಕಂದಾಗ ಅದಕ್ಕೆ ಸಿಒ ಅವರು ಕೂಡಲೇ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಲಕ್ಷ್ಮಣ ರಾಠೋಡ್, ಜಿಪಂ ಸದಸ್ಯ ಪ್ರಕಾಶ ಪಾಟೀಲ, ತಹಸೀಲ್ದಾರ್ ಹಬೀಬುರ್ ರಹಮಾನ್, ಇಒ ನಾಮದೇವ ರಾಠೋಡ್, ಅಕ್ಷರ ದಾಸೋಹ ಜಿಲ್ಲಾ ನಿದೇರ್ಶಕರ ಹನುಮಂತಪ್ಪ, ಜೆಸ್ಕಾಂ ಅಧಿಕಾರಿ ಶಂಕರ ಅಡಿಕಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.