ಶಿವಮೊಗ್ಗ: ರಂಗಾಯಣ ಶಿವಮೊಗ್ಗ, ಸ್ಥಾಪನಾ ದಿನದ ನೆನಪಿಗಾಗಿ ಕುವೆಂಪು ರಂಗಮಂದಿರದಲ್ಲಿ ಏಳು ದಿನಗಳ ಕಾಲ ಹಮ್ಮಿಕೊಂಡಿರುವ ಹೊಸ ನಾಟಕಗಳ `ರಂಗ ಸಿಹಿಮೊಗೆ~ ನಾಟಕೋತ್ಸವಕ್ಕೆ ಹಿರಿಯ ಪತ್ರಕರ್ತ ಪ್ರಮೋದ್ ಮೆಳ್ಳಿಗಟ್ಟಿ ಭಾನುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಂಗಾಯಣದಿಂದ ಸ್ಥಳೀಯ ಕಲಾವಿದರಿಗೆ ಉತ್ತಮ ತರಬೇತಿ ಸಿಗಬೇಕು ಎಂದು ಸಲಹೆ ಮಾಡಿದರು. ರಂಗಭೂಮಿಗೆ ಹೊಸ ಕಲಾವಿದರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಕಲಾವಿದರಿಗೆ ಇನ್ನಷ್ಟು ಅವಕಾಶಗಳು ಸಿಗಬೇಕಿದೆ ಎಂದರು.
ರಂಗಾಯಣ, ರಂಗಭೂಮಿ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಹಮ್ಮಿಕೊಂಡಾಗ ಮಾತ್ರ ರಂಗಾಯಣ ಸಾರ್ಥಕತೆ ಕಂಡುಕೊಳ್ಳುತ್ತದೆ ಎಂದ ಅವರು, ಕಡಿಮೆ ಅವಧಿಯಲ್ಲಿ ಹಲವು ನಾಟಕೋತ್ಸವಗಳನ್ನು ಹಮ್ಮಿಕೊಂಡು ಶಿವಮೊಗ್ಗ ರಂಗಾಯಣ ಸಾರ್ಥಕ ಕೆಲಸ ಮಾಡಿದೆ ಎಂದು ಪ್ರಶಂಸಿಸಿದರು.
ಕಲಾವಿದರ ಒಕ್ಕೂಟದ ಅಧ್ಯಕ್ಷ ಪ್ರೊ.ಎಸ್.ಸಿ. ಗೌರಿಶಂಕರ್ ಉಪಸ್ಥಿತರಿದ್ದರು. ರಂಗಾಯಣ ಶಿವಮೊಗ್ಗದ ನಿರ್ದೇಶಕ ಹೊ.ನ. ಸತ್ಯ ಅಧ್ಯಕ್ಷತೆ ವಹಿಸಿದ್ದರು. ತದನಂತರ `ಗೆಲಿಲಿಯೊ~ (ರಂಗರೂಪ-ನಿರ್ದೇಶನ: ಪ್ರೊ.ಎಸ್.ಸಿ. ಗೌರಿಶಂಕರ್) ನಾಟಕವನ್ನು ಅಭಿನಯ ತಂಡ ಪ್ರದರ್ಶಿಸಿತು.