ಗೋಕಾಕ: ಇಂದಿನ ಯುವ ಪೀಳಿಗೆ ವಸ್ತುಸ್ಥಿತಿಗೆ ಅಂಟಿಕೊಂಡು ದೇಶದ ಇತಿಹಾಸವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿದರು.
ಮಂಗಳವಾರ ಇಲ್ಲಿಯ ತಂಜೀಮ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಕಲಾಮ್ ಆಜಾದ್ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಜರುಗಿದ ಅಖಿಲ ಭಾರತ ಉರ್ದು ಕವಿ ಸಮ್ಮೇಳನ ಹಾಗೂ ಉರ್ದು ಸಾಹಿತ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಭಾಷೆಗಳ ಕಲಿಕೆ ಅಗತ್ಯವಾಗಿದ್ದು, ಇದರಿಂದ ಸ್ಥಳೀಯ ಮಟ್ಟದ ವಿವಿಧ ಸಮಸ್ಯೆಗಳ ನಿವಾರಣೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಅದರೊಂದಿಗೆ ಸ್ಥಾನಿಕ ಹಾಗೂ ಜನಪ್ರಿಯ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನೆರವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಳಗಾವಿ ಶಾಸಕ ಫಿರೋಜ್ ಸೇಠ್ ಮಾತನಾಡಿ, ಮುಸ್ಲಿಂ ಸಮಾಜ ಬಾಂಧ ವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಗುಣಮಟ್ಟದ ಶಿಕ್ಷಣ ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಬೆಳೆಯುತ್ತಿರುವ ಜನಸಂಖ್ಯೆ ಗಮನಿಸಿದರೆ ಎಲ್ಲಾ ಸಮುದಾಯಗಳ ಜನಾಂಗದವರ ಅಭ್ಯುದಯಕ್ಕೆ ಬೃಹದಾಕಾರದ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಈ ಸಾಹಿತ್ಯ ಸಮಾವೇಶದಿಂದ ಸಾರ್ವ ಜನಿಕರಲ್ಲಿ ಕೋಮು ಸೌಹಾರ್ದ ಮನೋಭಾವನೆ ಮೂಡಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಂಜೀಮ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಕಲಾಮ್ ಆಜಾದ್ ಪದವಿ ಪೂರ್ವ ಮಹಾವಿದ್ಯಾಲಯದ ಸಭಾ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿದರು.ಕೋಮು ಸೌಹಾರ್ದತೆ, ಸಾಮರಸ್ಯ ಹಾಗೂ ಸಮಾನತೆಯ ಮನೋಭಾವನೆ ಉಳಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದ ಅವರು, ತಂಜೀಮ್ ಶಿಕ್ಷಣ ಸಂಸ್ಥೆಗೆ 10 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಉರ್ದು ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎಂ. ಅಕೀಲ ಹಾಗೂ ಇಲಕಲ್~ನ ಅರಬ್ಬಿ ಭಾಷಾ ಪಂಡಿತ ಲಾಲಹುಸೇನ್ ಕಂದಗಲ್ ಉಪನ್ಯಾಸ ನೀಡಿದರು.ಸಂಸ್ಥೆಯ ಅಧ್ಯಕ್ಷ ಶೇಖ್ಫತೇವುಲ್ಲಾ ಕೋತವಾಲ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ನಜೀರ್ಅಹ್ಮದ ಶೇಖ್, ರಾಜು ಶೇಠ್, ಜಾವೇದ್ ಮುಲ್ಲಾ ಹಾಗೂ ನಗರಸಭೆ ಮಜಿ ಉಪಾಧ್ಯಕ್ಷ ಅಬ್ಬಾಸ್ ರೆಹಮಾನ್ ದೇಸಾಯಿ ಉಪಸ್ಥಿತರಿದ್ದರು. ಸಂಸ್ಥೆ ಗೌರವ ಕಾರ್ಯದರ್ಶಿ ಕಾಶೀಮ್ ಅಲಿ ಬಸಾಪೂರ ಸ್ವಾಗತಿಸಿದರು. ಮೊಹಸೀನ್ ಖಾಜಾ ವರದಿ ವಾಚನ ಮಾಡಿದರು.
ಎಫ್. ಎಂ. ಖೈರದಿ ಹಾಗೂ ಎಸ್.ಎಂ, ಫೀರಜಾದೆ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.