ಬೆಂಗಳೂರು: `ಆಡಳಿತದ ದೃಷ್ಟಿಯಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುವವರು ಸ್ಥಳೀಯ ಭಾಷೆಯನ್ನು ಕಲಿಯುವುದು ಅತೀ ಅಗತ್ಯ' ಎಂದು ಕೇಂದ್ರೀಯ ಅಬಕಾರಿ ಇಲಾಖೆಯ ಬೆಂಗಳೂರು ವಲಯದ ಮುಖ್ಯ ಆಯುಕ್ತರಾದ ವನಜಾ ಎನ್. ಸರ್ನ್ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೇಂದ್ರೀಯ ಅಬಕಾರಿ, ಸೀಮಾ ಸುಂಕ ಮತ್ತು ಸೇವಾ ತೆರಿಗೆ ಇಲಾಖೆಯ ಆಶ್ರಯದಲ್ಲಿ ಕೇಂದ್ರ ರಾಜಸ್ವ ಕಟ್ಟಡದಲ್ಲಿ ಈಚೆಗೆ ನಡೆದ ಕನ್ನಡ ಬಾರದವರಿಗೆ ಕನ್ನಡ ಕಲಿಕೆ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಸ್ಥಳೀಯ ಭಾಷೆಯ ಪ್ರೌಢಿಮೆಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮದೇ ಭಾಷೆ ಎಂಬ ಮನೋಭಾವದಿಂದ ಕಲಿಯಬೇಕು. ಹೆಚ್ಚು ಭಾಷೆ ಕಲಿತಷ್ಟು ಉತ್ತಮ. ಈ ಕಾರ್ಯಕ್ರಮದ ಲಾಭವನ್ನು ಸಿಬ್ಬಂದಿ ಪಡೆಯಬೇಕು' ಎಂದು ಕಿವಿಮಾತು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಅಧಿಕಾರಿ ಶಿವಪ್ರಕಾಶ್, `3 ತಿಂಗಳ ಕಾಲ ಕನ್ನಡ ಕಲಿಸಲಾಗುವುದು. ವಾರಕ್ಕೆ 3 ತರಗತಿಗಳು ಇರಲಿವೆ. ಎಲ್. ವಿನಾಯಕ ಕುಲಕರ್ಣಿ ಬೋಧಕರಾಗಿರುವರು. ಕನ್ನಡ ನೆಲದಲ್ಲಿ ಸೇವೆ ಸಲ್ಲಿಸುವವರು ಕನ್ನಡ ಭಾಷೆಯನ್ನು ಅರಿತುಕೊಳ್ಳುವುದು ಕಡ್ಡಾಯ' ಎಂದರು.
ಕನ್ನಡ ಸಂಘದ ಅಧ್ಯಕ್ಷ ಜಿ.ಬಿ. ಈಶ್ವರಪ್ಪ, ಶಿಬಿರದ ಸಂಚಾಲಕ ಮ. ಚಂದ್ರಶೇಖರ್ ಉಪಸ್ಥಿತರಿದ್ದರು.