ಮಾಲೂರು: ಸ್ಥಳೀಯ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಲಭ್ಯಗಳ ಕೊರತೆಯಿಂದ ಬೃಹತ್ ಕೈಗಾರಿಕೆ ಸ್ಥಾಪಿಸಲು ಅನೇಕ ಉದ್ಯಮಿಗಳು ಆಸಕ್ತಿ ತೋರುತ್ತಿಲ್ಲ. ಈ ಹಿಂದೆ ಹಲವು ಬಾರಿ ಮೂಲ ಸವಲತ್ತುಗಳನ್ನು ಕಲ್ಪಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ್ ವಿಷಾದಿಸಿದರು.
ಪಟ್ಟಣದ ಹೊರವಲಯದ ನೊಸಗೆರೆ ಕೈಗಾರಿಕಾ ಪ್ರಾಂಗಣದಲ್ಲಿ ಕೈಗಾರಿಕಾ ಮಾಲೀಕರ ಸಂಘ ಹಾಗೂ ಭುವನೇಶ್ವರಿ ಕನ್ನಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಈ ಭಾಗದ ರೈತರು ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ಜಮೀನನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಕಾರ್ಮಿಕರಿಗಾಗಿ ಇಎಸ್ಐ ಆಸ್ಪತ್ರೆ ಸ್ಥಾಪಿಸಬೇಕು. ಸುತ್ತಲಿನ ಪರಿಸರಕ್ಕೆ ಕೈಗಾರಿಕೆ ದುಷ್ಪರಿಣಾಮ ಬೀರದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಜಿ.ಪಂ.ಸದಸ್ಯೆ ಯಲ್ಲಮ್ಮ, ನೊಸಗೆರೆ ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ ಮುನಿರಾಜು, ಸದಸ್ಯರಾದ ಬಿ.ಎನ್.ಮಲ್ಲಿಕಾರ್ಜುನಯ್ಯ, ಕೆ.ಎಂ.ಅಶೋಕ್ ಕುಮಾರ್, ವೆಂಕಟೇಶಪ್ಪ, ಸಿ.ಎಂ.ನಾರಾಯಣಸ್ವಾಮಿ, ಎಂ.ನಾಗರಾಜ್, ಮುಖಂಡರಾದ ಎನ್.ವಿ.ಈಶ್ವರಯ್ಯ, ಬ್ಯಾಲಹಳ್ಳಿ ಕೃಷ್ಣಪ್ಪ, ಕರವೇ ತಾಲ್ಲೂಕು ಅಧ್ಯಕ್ಷೆ ಲತಾಬಾಯಿ, ಎಸ್.ಎಂ.ರಾಜು, ಸವಿತಾ ನಾಗರಾಜ್, ಮಂಗಮ್ಮ, ಎಂ.ನಾಗರಾಜು, ನಾರಾಯಣರೆಡ್ಡಿ, ಮುನಿರೆಡ್ಡಿ, ನಾರಾಯಣಸ್ವಾಮಿ, ಮುನಿರಾಜು ಹಾಜರಿದ್ದರು.