ನವದೆಹಲಿ (ಪಿಟಿಐ): ಭಯೋತ್ಪಾದನಾ ಸಂಘಟನೆ ಲಷ್ಕರ್–ಎ–ತೈಯಬಾದ ಇಬ್ಬರು ಶಂಕಿತ ಉಗ್ರರು ಮುಜಫ್ಫರ್ನಗರದಲ್ಲಿ ಇಬ್ಬರು ಸ್ಥಳೀಯರನ್ನು ಭೇಟಿಯಾಗಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕೋಮು ಗಲಭೆಯ ಅತೃಪ್ತ ಸಂತ್ರಸ್ತರನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಂಪರ್ಕಿಸುತ್ತಿದೆ ಎಂದು ಮೂರು ತಿಂಗಳ ಹಿಂದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಆದರೆ ಲಷ್ಕರ್ ಉಗ್ರರು ಭೇಟಿಯಾಗಿರುವ ಸ್ಥಳೀಯ ನಿವಾಸಿಗಳು ಗಲಭೆ ಸಂತ್ರಸ್ತರಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಹರಿಯಾಣಾದ ಮೇವಾಟ್ ಪ್ರದೇಶದಲ್ಲಿ ಶಂಕಿತ ಲಷ್ಕರ್ ಉಗ್ರರಾದ ಮೊಹಮ್ಮದ್ ಶಹೀದ್ ಮತ್ತು ಮೊಹಮ್ಮದ್ ರಶೀದ್ ಎಂಬವರನ್ನು ಬಂಧಿಸಲಾಗಿದೆ. ಇವರಿಬ್ಬರು ಮಸೀದಿ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ಸಂಬಂಧಿಸಿ ಮುಜಫ್ಫರ್ನಗರ ನಿವಾಸಿಗಳಾದ ಜಮೀರ್ ಮತ್ತು ಲಿಯಾಕತ್ ಎಂಬವರನ್ನು ಭೇಟಿಯಾಗಿದ್ದರು ಎಂದು ದೆಹಲಿ ವಿಶೇಷ ಪೊಲೀಸ್ ಘಟಕದ ವಿಶೇಷ ಆಯುಕ್ತರಾದ ಶ್ರೀವಾತ್ಸವ ತಿಳಿಸಿದ್ದಾರೆ.
ಬಂಧಿತ ಉಗ್ರರಿಬ್ಬರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಮತ್ತು ಅವರ ಸಂಪರ್ಕಗಳನ್ನು ಜಾಲಾಡಿದ್ದಾರೆ.
ಸಂಪರ್ಕದ ಕತೆ: ಮುಜಫ್ಫರ್ನಗರದ ಕೆಲವರೊಂದಿಗೂ ಅವರು ಸಂಪರ್ಕದಲ್ಲಿರುವುದು ಈ ವಿಚಾರಣೆಯಲ್ಲಿ ಗೊತ್ತಾಗಿದೆ. ರಶೀದ್, ಇನ್ನೊಬ್ಬ ವ್ಯಕ್ತಿಯೊಂದಿಗೆ (ಆ ವ್ಯಕ್ತಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ) ದೇವ್ಬಂದ್ಗೆ ಹೋಗಿದ್ದ.
ಅಂದು ರಾತ್ರಿ ಅವರು ಉತ್ತರ ಪ್ರದೇಶ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಲಿಯಾಕತ್ ಮನೆಯಲ್ಲಿ ತಂಗಿದ್ದಾರೆ. ಅಲ್ಲಿಯೇ ಲಿಯಾಕತ್ ಗೆಳೆಯ ಜಮೀರ್ನ ಪರಿಚಯವೂ ಉಗ್ರರಿಗೆ ಆಗಿದೆ.
ನಂತರ ರಶೀದ್, ಸ್ನೇಹಿತ ಜಮೀರ್ಗೆ ಕರೆ ಮಾಡಿ, ತಾನು ಒಂದು ಮಸೀದಿ ನಿರ್ಮಿಸಲು ಬಯಸಿದ್ದು ಅದಕ್ಕೆ ಹಣ ಬೇಕು ಎಂದು ಹೇಳಿದ್ದಾನೆ. ಹಣಕ್ಕಾಗಿ ಯಾರನ್ನಾದರೂ ಅಪಹರಣ ಮಾಡೋಣ ಎಂಬ ಯೋಜನೆಯನ್ನೂ ವಿವರಿಸಿದ್ದಾನೆ.
ಆದರೆ ಅವರು ಅಪಹರಣ ಮಾಡಲು ಯತ್ನಿಸುತ್ತಿರುವುದರಿಂದ ಜಮೀರ್ ಇವರ ಸಂಪರ್ಕ ಕಡಿದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಲಿಯಾಕತ್ ಮತ್ತು ಜಮೀರ್ ಅವರನ್ನು ಸಾಕ್ಷಿಗಳೆಂದು ಪರಿಗಣಿಸಲಾಗಿದೆ.