ಹಿರಿಯೂರು: ಜನಗಣತಿಯ ಮೂಲಕ ಎಲ್ಲಾ ವರ್ಗ ಹಾಗೂ ಧರ್ಮಗಳ ಜನರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಕರಾರುವಾಕ್ಕಾಗಿ ಅಧ್ಯಯನ ಮಾಡಲು ಸಾಧ್ಯವಿದೆ ಎಂದು ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ತಿಳಿಸಿದರು.ನಗರದ ರಂಗನಾಥ ಡಿಇಡಿ ಕಾಲೇಜಿನಲ್ಲಿ ಸೋಮವಾರ ತಾಲ್ಲೂಕು ಆಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ಜನಗಣತಿಯ ಉದ್ದೇಶಗಳು ಹಾಗೂ ನಾಗರಿಕರ ಕರ್ತವ್ಯಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ-ವರ್ಗದ ನಿಖರ ಜನಸಂಖ್ಯೆ, ಅವರ ಶೈಕ್ಷಣಿಕ ಸ್ಥಿತಿ, ಬೇರೆ ಬೇರೆ ಧರ್ಮಗಳ ಜನರ ಪ್ರಮಾಣ, ಬೆಳವಣಿಗೆ ದರ, ಶಿಶು ಮರಣ ಪ್ರಮಾಣ, ಜನರ ಸಾಮಾಜಿಕ, ಆರ್ಥಿಕ ಸ್ಥಿತಿ, ಉದ್ಯೋಗ ಮಾಹಿತಿ ಪಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆ ರೂಪಿಸಲು ಜನಗಣತಿ ಸಹಾಯಕವಾಗಲಿದೆ ಎಂದು ಅವರು ವಿವರಿಸಿದರು.
ದೇಶದ ಜನಸಂಖ್ಯೆ 120 ಕೋಟಿ ಇದೆ ಎಂದು ಮಾಡಿಕೊಂಡಿರುವ ಅಂದಾಜಿನ ನಿಖರತೆ ಗಣತಿಯಿಂದ ತಿಳಿಲಿದೆ. ಜನರ ಜೀವನಮಟ್ಟ ಕುರಿತ ವೈಜ್ಞಾನಿಕ ಅಧ್ಯಯನ ಗಣತಿಯ ಮೂಲಕ ನಡೆಯಲಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಜೀವನಮಟ್ಟ ಸುಧಾರಿಸುವಂತಹ ಯೋಜನೆ ರೂಪಿಸಬಹುದಾಗಿದೆ. ಈಗಿನ ಗಣತಿ ವಿಶ್ವದಲ್ಲೇ ಬೃಹತ್ ಕಾರ್ಯಕ್ರಮವಾಗಿದ್ದು, ಇದರ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದು ಕ್ಷೇತ್ರ ಸಂಪನ್ಮೂಲಾಧಿಕಾರಿ ಡಿ. ನರಸಿಂಹಪ್ಪ ತಿಳಿಸಿದರು.
ಜನಗಣತಿಯ ನಂತರ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಗುರುತು ಪತ್ರ ವಿತರಣೆ, ಸ್ತ್ರೀಶಿಕ್ಷಣಕ್ಕೆ ಒತ್ತು, ಲಿಂಗಾನುಪಾತ ವ್ಯತ್ಯಾಸ ತಪ್ಪಿಸಿ, ಲಿಂಗ ಸಮಾನತೆ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ನಾಗರಿಕರಿಗೆ ಜನಗಣತಿಯ ಅರಿವು ಮೂಡಿಸಲು ತಾಲ್ಲೂಕು ಆಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸದರಿ ಕಾರ್ಯಕ್ರಮ ನಡೆಸುತ್ತಿರುವುದಾಗಿ ವಾರ್ತಾ ಇಲಾಖೆ ಅಧಿಕಾರಿ ಧನಂಜಯಕುಮಾರ್ ತಿಳಿಸಿದರು.ಪ್ರಾಂಶುಪಾಲ ಪಿ. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬಿ. ತಿಪ್ಪೇಸ್ವಾಮಿ ಮಾತನಾಡಿದರು. ಪಾಲಾಕ್ಷಪ್ಪ ವಂದಿಸಿದರು.