ಲಂಡನ್ (ಪಿಟಿಐ): `ಗರ್ಭಿಣಿ ಸವಿತಾ ಹಾಲಪ್ಪನವರ ಆರೋಗ್ಯ ಸ್ಥಿರವಾಗಿತ್ತು. ಪ್ರಾಣಾಪಾಯವೇನೂ ಇರಲಿಲ್ಲ ಮತ್ತು ಭ್ರೂಣದ ಹೃದಯ ಬಡಿದುಕೊಳ್ಳುತ್ತಿದ್ದ ಕಾರಣ ನಾನು ಆಕೆಗೆ ಗರ್ಭಪಾತ ಮಾಡಲಿಲ್ಲ' ಎಂದು ಪ್ರಸೂತಿ ತಜ್ಞೆ ಡಾ. ಕ್ಯಾಥರಿನ್ ಆ್ಯಸ್ಟ್ಬರಿ ಅವರು ಸಾಕ್ಷ್ಯ ನುಡಿದಿದ್ದಾರೆ.
ಐರ್ಲೆಂಡ್ ಕಟ್ಟಾ ಕ್ಯಾಥೊಲಿಕ್ ಸಂಪ್ರದಾಯ ದೇಶ ಎನ್ನುವ ಕಾರಣಕ್ಕೆ ಗರ್ಭಪಾತ ಮಾಡಲಿಲ್ಲ ಎಂಬಆರೋಪವನ್ನು ಅವರು ಅಲ್ಲಗೆಳೆದಿದ್ದಾರೆ.
ಕರ್ನಾಟಕ ಮೂಲದ ದಂತವೈದ್ಯ ಸವಿತಾ ಹಾಲಪ್ಪನವರ ಸಾವು ಪ್ರಕರಣದ ವಿಚಾರಣೆ ನಡೆಸುತ್ತಿರುವ ಗಾಲ್ವೇ ಕೋರ್ಟ್ಹೌಸ್ಗೆ ಹಾಜರಾದ ಡಾ. ಕ್ಯಾಥರಿನ್, ಗಾಲ್ವೇ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಸವಿತಾ ಅವರ ಚಿಕಿತ್ಸೆಯಲ್ಲಿ ಹಲವು ಲೋಪಗಳು ಆಗಿದೆ ಎಂದು ಪಾಟೀಸವಾಲಿನ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ.
`ಸವಿತಾ ಅವರ ರಕ್ತ ಪರೀಕ್ಷೆಯ ವಿವರಗಳು ನನಗೆ ತಿಳಿದಿರಲಿಲ್ಲ. ಆದರೆ, ಆಕೆಯ ಗರ್ಭಚೀಲಕ್ಕೆ ಧಕ್ಕೆ ಆಗಿದೆ ಎಂದು ತಿಳಿದ ಮೇಲೆ, ಆ ಬಗ್ಗೆ ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತಿತ್ತು' ಎಂದೂ ಸವಿತಾ ಅವರನ್ನು ತಪಾಸಣೆ ಮಾಡುತ್ತಿದ್ದ ಡಾ. ಕ್ಯಾಥರಿನ್ ಹೇಳಿದ್ದಾರೆ.
ಕಣ್ಣೀರಿಟ್ಟ ಪ್ರವೀಣ್
ಈ ಮೊದಲು ನಡೆದ ವಿಚಾರಣೆಯಲ್ಲಿ ಸಾಕ್ಷ್ಯ ನುಡಿದಿದ್ದ ಸವಿತಾ ಅವರ ಪತಿ ಪ್ರವೀಣ್ ಹಾಲಪ್ಪನವರ ಅವರು, ತಮ್ಮ ಪತ್ನಿ ಸಾವಿಗೆ ಕಾರಣವಾದ ಸನ್ನಿವೇಶಗಳನ್ನು ನೆನೆದು ಕಣ್ಣೀರು ಸುರಿಸಿದ್ದರು.
`ಅತ್ಯಂತ ವೇದನೆ ಪಡುತ್ತಿದ್ದ ಸವಿತಾ, ಗರ್ಭಪಾತ ಮಾಡುವಂತೆ ಎರಡು ಸಾರಿ ಮನವಿ ಮಾಡಿಕೊಂಡಿದ್ದಳು. ಆದರೆ, ಆಕೆಯ ಕೋರಿಕೆಯನ್ನು ವೈದ್ಯರು ಮನ್ನಿಸಲಿಲ್ಲ' ಎಂದು ಅವರು 45 ನಿಮಿಷಗಳ ಕಾಲ ವಿವರಣೆ ನೀಡಿದ್ದರು.