ಬೀದರ್: ಅಭಿವೃದ್ಧಿಯ ದೃಷ್ಟಿಯಿಂದ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಕೇಡರ್ನ ಉನ್ನತ ಹುದ್ದೆಗಳಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಹೇಳಿದರು.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಗರದ ಕರ್ನಾಟಕ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಐಎಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಆರು ತಿಂಗಳ ಅವಧಿಯ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಉನ್ನತ ಹುದ್ದೆಗಳಲ್ಲಿ ಈ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಕಾರಣ ಇತರೆ ಭಾಗದವರು ಇಲ್ಲಿಗೆ ಬಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಥಳೀಯರು ಇದ್ದರೆ ಉತ್ತಮ’ ಎಂದರು.
‘ಹಿಂದುಳಿದ ಭಾಗದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿದೆ. ಆದರೆ ಆ ಅನುದಾನ ಸದ್ಬಳಕೆಗೆ ಅಧಿಕಾರಿ ವರ್ಗ ಪ್ರಯತ್ನಿಸಬೇಕು. ಈ ಭಾಗದ ಪ್ರಗತಿಗೆ ಪೂರಕವಾಗಿ ಮೊದಲು ಈ ಭಾಗದವರು ಉನ್ನತ ಹುದ್ದೆಗಳನ್ನು ಪಡೆಯುವುದಕ್ಕೆ ಮುಂದಾಗಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಆರ್ಇ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಪಾಟೀಲ್, ಈ ಭಾಗದ ಅಭ್ಯರ್ಥಿಗಳು ಕಷ್ಟಪಟ್ಟು ಅಭ್ಯಸಿಸುವ ಮೂಲಕ ಉನ್ನತ ಹುದ್ದೆಪಡೆಯಲು ಶ್ರಮಿಸಬೇಕು. ಪ್ರತಿಭಾವಂತರು ಇದ್ದರೂ, ಮಾರ್ಗದರ್ಶನದ ಕೊರತೆ ಇದೆ ಎಂದು ಅಭಿಪ್ರಾಯಪಟ್ಟರು.
ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಪನ್ವಾರ್, ಕೆಆರ್ಇ ಸಂಸ್ಥೆ ಉಪಾಧ್ಯಕ್ಷ ಬಿ.ಜಿ. ಶೆಟಕಾರ್, ಕಾರ್ಯದರ್ಶಿ ಬಸವರಾಜ ಜಾಬಶೆಟ್ಟಿ, ಪ್ರಾಚಾರ್ಯ ಪ್ರೊ. ವಿಜಯಕುಮಾರ್ ಗಂಗು, ಪ್ರಮುಖರಾದ ರೋಸಲಿನ ಲಿಲ್ಲನ್, ಪವನಕುಮಾರ್ ಎಂ. ಇದ್ದರು.