ಹುಬ್ಬಳ್ಳಿ: `ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು~ ಎಂದು ಧಾರವಾಡ ಡಯಟ್ ಸಂಸ್ಥೆಯ ಪಿಎಸ್ಟಿ ವಿಭಾಗದ ಮುಖ್ಯಸ್ಥ ಆರ್.ಎಚ್. ಶಿವಳ್ಳಿ ಸಲಹೆ ನೀಡಿದರು.
ನಗರದ ಬಿ.ವಿ. ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ ಹುಬ್ಬಳ್ಳಿ ವಲಯ ಮಟ್ಟದ ಡಿ.ಇಡಿ ಕಾಲೇಜು ವಿದ್ಯಾರ್ಥಿಗಳ ಯುವಜನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.
`ಸದೃಢ ದೇಹವಿದ್ದಾಗ ಸದೃಢ ಮನಸ್ಸು ಇರಲು ಸಾಧ್ಯ. ಇದಕ್ಕಾಗಿ ದೈಹಿಕವಾಗಿ ಸದೃಢವಂತರಾಗಲು ಕ್ರೀಡೆಗಳಲ್ಲಿ ಭಾಗವಹಿಸಬೇಕು~ ಎಂದು ಅವರು ಕಿವಿಮಾತು ಹೇಳಿದರು. ಧ್ವಜಾರೋಹಣಗೈದ ಜೆಜಿಟಿಟಿಐ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಬಿ.ಜಿ. ವಾಲಿ, ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಶಿಕ್ಷಕರಾದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಗ್ರಾಮಗಳನ್ನು ಕಟ್ಟಿರಿ ಎಂದರು.
ಮುಖ್ಯ ಅತಿಥಿಗಳಾಗಿ ಡಯಟ್ ಉಪನ್ಯಾಸಕ ಎ.ಎನ್. ಕಾಂಬೋಗಿ, ಜೆಜಿಟಿಟಿಐ ಅಧೀಕ್ಷಕ ಎಸ್.ವೈ. ಕುಂದರಗಿ, ಎಚ್ಎಸ್ಫ್ ಡಿ.ಇಡಿ ಕಾಲೇಜಿನ ಕಾರ್ಯದರ್ಶಿ ಗೌಸ್ ಖಾನ್ ಗುರಾಣಿ, ಡಯಟ್ ಉಪನ್ಯಾಸಕ ಎಂ.ಎ. ಕುಲಕರ್ಣಿ ಹಾಗೂ ದೈಹಿಕ ಶಿಕ್ಷಣಾಧಿಕಾರಿ ಎಂ.ಜೆ. ಅಂಗಡಿ ಭಾಗವಹಿಸಿದ್ದರು.
ಮೀನಾಕ್ಷಿ ಭಜಂತ್ರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪಿ.ಕೆ. ಸುಧಾಕರ ಸ್ವಾಗತಿಸಿದರು. ಶ್ರೀಕಾಂತ ಸುಣಗಾರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮುತ್ತುರಾಜ ಗುಲಗಂಜಿ ವಂದಿಸಿದರು.