ಕುಂದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ವೇಗದ ಹೆಜ್ಜೆಯನ್ನು ಇಡುತ್ತಿರುವ ವಿದ್ಯಾರ್ಥಿಗಳು ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಸ್ಪರ್ಧೆಯ ಬದುಕನ್ನು ರೂಪಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಈ ರೀತಿಯ ಮನೋಭಾವವನ್ನು ರೂಢಿಸಿಕೊಳ್ಳದೆ ಹೋದರೆ ಅವಕಾಶಗಳು ಕೈತಪ್ಪುವ ಸಾಧ್ಯತೆಗಳು ಇದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕುಂದಾಪುರದ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ಮಾಧವ ಮಂಟಪದಲ್ಲಿ ಶನಿವಾರ ನಡೆದ ಸುವರ್ಣ ಸಂಭ್ರಮ ಸಭೆಯಲ್ಲಿ ಸ್ಮರಣ ಸಂಚಿಕೆ ‘ಹೊನ್ನ ಭಂಡಾರ’ ಅನಾವರಣ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವನ್ನು ಮುಗಿಸಿ ಶಿಕ್ಷಣ ಸಂಸ್ಥೆಯಿಂದ ಹೊರ ಬರುವಾಗ ಜ್ಞಾನ ದಾಹವನ್ನು ಇಂಗಿಸಿಕೊಂಡ ಸಂತೃಪ್ತಿಯ ಭಾವವವಿರಬೇಕು. ಶ್ರದ್ಧೆಯ ಓದು, ವ್ಯಕ್ತಿಯ ವಿಕಸನಕ್ಕೆ ನಾಂದಿಯಾಗುತ್ತದೆ. ಅಧ್ಯಯನ ವ್ಯಾಪ್ತಿ ವಿಶಾಲವಾದಾಗ ಭೌದ್ಧಿಕ ಮಟ್ಟವೂ ವಿಕಸನಗೊಂಡು ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆಧುನಿಕತೆ ಹಾಗೂ ವಿಜ್ಞಾನ ಯುಗದ ಬೆಳವಣಿಗೆಯಿಂದಾಗಿ ಶಿಕ್ಷಕರನ್ನೇ ಮೌಲ್ಯಮಾಪನ ಮಾಡುವಷ್ಟು ವಿದ್ಯಾರ್ಥಿಗಳು ಪರಿಪಕ್ವವಾಗಿದ್ದಾರೆ ಎಂದರು.
ಕಲಿಯುವಿಕೆಗೆ ಕೊನೆ ಇಲ್ಲ, ಜ್ಞಾನ ದಾಹ ಉತ್ತಮ ಪ್ರಗತಿಗೆ ದಾರಿಯಾಗುತ್ತದೆ ಎಂದು ಹೇಳಿದ ಅವರು ಪರಿಪೂರ್ಣವಾದ ವಿದ್ಯೆ ದೊರಕಿದಾಗ ಬದುಕಿಗೊಂದು ಶೋಭೆ ಬರುತ್ತದೆ ಎಂದರು.
ಆಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಅದ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಚಂದ್ರಶೇಖರ್ ಶೆಟ್ಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕೆ.ಆರ್.ಕಾಮತ್ ಮುಖ್ಯ ಅತಿಥಿಗಳಾಗಿದ್ದರು.
ಕಾಲೇಜಿನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ವಿಶ್ವಸ್ಥರಾದ ಬಿ.ಎಂ.ಸುಕುಮಾರ್ ಶೆಟ್ಟಿ, ದೇವದಾಸ ಕಾಮತ್, ಸೋಲೊಮನ್ ಸೋನ್ಸ್, ಶಾಂತಾರಾಮ ಪ್ರಭು, ರಾಜೇಂದ್ರ ತೋಳಾರ್, ಎಂ.ಪದ್ಮಾಕರ ನಾಯಕ್, ಸದಾನಂದ ಚಾತ್ರ ಹಾಗೂ ಶಿಕ್ಷಕ-–ರಕ್ಷಕ ಸಂಘದ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ನರಸಿಂಹ, ಬೋಧಕರ ಪ್ರತಿನಿಧಿ ಕೋಟ ಶಾಂತಾರಾಮ್ ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡಾ ಮತ್ತಿತರರು ಇದ್ದರು.
ಕಾಲೇಜು ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಡಾ.ಎಚ್.ಶಾಂತಾರಾಮ್ ಸ್ವಾಗತಿಸಿದರು. ಸಸ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ವಿ.ಅರವಿಂದ ಹೆಬ್ಬಾರ್ ಸಂದೇಶ ವಾಚಿಸಿದರು, ವಿಶ್ರಾಂತ ಉಪನ್ಯಾಸಕ ಡಾ.ಎಚ್.ವಿ ನರಸಿಂಹಮೂರ್ತಿ ನಿರೂಪಿಸಿದರು, ಕಾಲೇಜಿನ ಪ್ರಾಚಾರ್ಯ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.