ಬೆಂಗಳೂರು: `ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಅರ್ಥ ವ್ಯವಸ್ಥೆಯ ನಿಜವಾದ ಚಿತ್ರಣ ನೀಡದಿರುವುದರಿಂದ ಅದರಲ್ಲಿ ಬದಲಾವಣೆ ತರುವ ಅಗತ್ಯ ಇದೆ~ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ನಿಯೋಜಿತ ಅಧ್ಯಕ್ಷ ಆದಿ ಬಿ. ಗೋದ್ರೆಜ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ನಡೆದ `ಸಿಐಐ~ನ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.
ನಿಧಾನ ಗತಿಯ ಆರ್ಥಿಕ ಬೆಳವಣಿಗೆಯನ್ನು `ಐಐಪಿ~ಯು ಉತ್ಪ್ರೇಕ್ಷೆಗೊಳಿಸಿದರೆ, ತ್ವರಿತವಾಗಿ ವೃದ್ಧಿಯಾಗುವುದನ್ನು ಅತಿ ಕಡಿಮೆ ಎಂಬಂತೆ ಬಿಂಬಿಸುತ್ತದೆ ಎಂದರು. ಡಿಸೆಂಬರ್ ತಿಂಗಳ `ಐಐಪಿ~ಯು ಅಲ್ಪ ಪ್ರಗತಿ ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅರ್ಥ ವ್ಯವಸ್ಥೆಯು ನಿಜವಾಗಿಯೂ ಉತ್ತಮ ಸಾಧನೆ ಮಾಡುತ್ತಿದೆ. ಆದರೆ, `ಐಐಪಿ~ ನೈಜ ಚಿತ್ರಣ ನೀಡುತ್ತಿಲ್ಲ ಎಂದರು.