ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಾಟ್ ಫಿಕ್ಸಿಂಗ್: ಉಳಿದ ಆಟಗಾರರಿಗೂ ಕಠಿಣ ಶಿಕ್ಷೆ, ಬಿಸಿಸಿಐ ಶಿಸ್ತು ಸಮಿತಿ ನಿರ್ಧಾರ

Last Updated 30 ಜೂನ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸ್ಪಾಟ್ ಫಿಕ್ಸಿಂಗ್ ಹಾಗೂ ಮೋಸದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಕ್ಕನ್ ಚಾರ್ಜರ್ಸ್ ತಂಡದ ವೇಗದ ಬೌಲರ್ ಟಿ.ಪಿ.ಸುಧೀಂದ್ರ ಅವರ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಜೀವ ನಿಷೇಧ ಹೇರಿದೆ. ಇನ್ನುಳಿದ ನಾಲ್ವರು ಆಟಗಾರರ ಮೇಲೂ ಕಠಿಣ ಶಿಕ್ಷೆ ವಿಧಿಸಿದೆ.

ದೇಶಿ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಲು ಒಪ್ಪಿಗೆ ನೀಡಿದ್ದು ಸಾಬೀತಾಗಿದ್ದರಿಂದ ಸುಧೀಂದ್ರ ಮೇಲೆ ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್‌ನ ಶಲಭ್ ಶ್ರೀವಾಸ್ತವಗೆ ಐದು ವರ್ಷ, ಅಮಿತ್ ಯಾದವ್, ಪುಣೆ ವಾರಿಯರ್ಸ್‌ನ ಮೋನಿಷ್ ಮಿಶ್ರಾ ಹಾಗೂ ಅಭಿನವ್ ಬಾಲಿ ಅವರ ಮೇಲೆ ತಲಾ ಒಂದು ವರ್ಷ ನಿಷೇಧ ಹೇರಲಾಗಿದೆ.

ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಸಾರಥ್ಯದಲ್ಲಿ ಶನಿವಾರ ನಡೆದ ಬಿಸಿಸಿಐ ಶಿಸ್ತು ಸಮಿತಿ ಸಭೆ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಮಿತಿಯಲ್ಲಿ ಅರುಣ್ ಜೇಟ್ಲಿ ಹಾಗೂ ನಿರಂಜನ್ ಷಾ ಕೂಡ ಇದ್ದಾರೆ. ಈ ಸಮಿತಿ ಟೆಲಿ ಕಾನ್ಫರೆನ್ಸ್ ಮೂಲಕ ಆಟಗಾರರ ವಿಚಾರಣೆ ನಡೆಸಿತು. ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ರವಿ ಸವಾನಿ ಅವರು ನೀಡಿದ ವಿಚಾರಣಾ ವರದಿ ಆಧಾರದ ಮೇಲೆ ಸಮಿತಿ ಈ ನಿರ್ಧಾರ ಕೈಗೊಂಡಿದೆ.

ಐಪಿಎಲ್ ಟೂರ್ನಿ ವೇಳೆ `ಇಂಡಿಯಾ ಟಿ.ವಿ~ ನಡೆಸಿದ ಮಾರುವೇಷದ ಕಾರ್ಯಾಚರಣೆ ವೇಳೆ ಈ ಆಟಗಾರರು ಸಿಕ್ಕಿಬಿದ್ದಿದ್ದರು. `ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಸ್ಟಾಟ್ ಫಿಕ್ಸಿಂಗ್ ಹಾಗೂ ಮೋಸದಾಟ ನಡೆಯುತ್ತಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕೆಲ ಆಟಗಾರರು ಇದರಲ್ಲಿ ಪಾಲ್ಗೊಂಡಿದ್ದಾರೆ~ ಎಂದು ಆ ಟಿ.ವಿ ಚಾನೆಲ್ ಹೇಳಿತ್ತು. ಆ ತಕ್ಷಣವೇ ಬಿಸಿಸಿಐ ಈ ಐವರು ಆಟಗಾರರನ್ನು ತಾತ್ಕಾಲಿಕ ಅಮಾನತಿಗೆ ಒಳಪಡಿಸಿತ್ತು. ಈ ಆಟಗಾರರ ಮೇಲಿನ ಶಿಕ್ಷೆ ಮೇ 15ರಿಂದಲೇ ಜಾರಿಗೆ ಬಂದಿದೆ.

`ದೇಶಿ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಲು ಒಪ್ಪಿಗೆ ನೀಡಿದ್ದು ಸಾಬೀತಾಗಿದ್ದರಿಂದ ಸುಧೀಂದ್ರ ಮೇಲೆ ಐದು ವರ್ಷ ನಿಷೇಧ ಹೇರಲಾಗಿದೆ. ಹಾಗಾಗಿ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ. ಅವರು ಜೀವನಪರ್ಯಂತ ಬಿಸಿಸಿಐನ ಯಾವುದೇ ಸೌಲಭ್ಯಕ್ಕೂ ಅರ್ಹರಲ್ಲ~ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಸುಧೀಂದ್ರ 2011-12ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ.

ವಿಚಾರಣೆ ವೇಳೆ ಸುಧೀಂದ್ರ, ಮೋನಿಷ್ ಹಾಗೂ ಬಾಲಿ ಅವರು ಸಮಿತಿ ಮುಂದೆ ಹಾಜರಿದ್ದರು. ಶ್ರೀವಾಸ್ತವ ಹಾಗೂ ಯಾದವ್ ಅವರನ್ನು ಟೆಲಿ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಲಾಯಿತು. ಅವರು ತಪ್ಪೊಪ್ಪಿಕೊಂಡರು.

`ಪಂದ್ಯವೊಂದರಲ್ಲಿ ನೋಬಾಲ್ ಮಾಡಲು ಒಬ್ಬ ಆಟಗಾರ 10 ಲಕ್ಷ ಬೇಡಿಕೆ ಇಟ್ಟಿದ್ದ. ವರದಿಗಾರರೊಬ್ಬರ ಒತ್ತಾಯದ ಮೇಲೆ ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ನೋಬಾಲ್ ಹಾಕಿದ್ದೆ ಎಂದು ಮತ್ತೊಬ್ಬ ಬೌಲರ್ ಹೇಳ್ದ್ದಿದ್ದ. 60 ಲಕ್ಷ ನೀಡಿದರೆ ಪಂದ್ಯದ ಫಲಿತಾಂಶ ಬದಲು ಮಾಡುತ್ತೇನೆ ಎಂದು ಆ ಆಟಗಾರ ಹೇಳ್ದ್ದಿದ~ ಎಂದು ಆ ಚಾನೆಲ್ ತನ್ನ ಮಾರುವೇಷದ ಕಾರ್ಯಾಚರಣೆಯಲ್ಲಿ ತಿಳಿಸಿತ್ತು.

ಜೊತೆಗೆ ಆ ಬೌಲರ್ ಜೊತೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿರುವುದನ್ನು ದಾಖಲಿಸಿಕೊಂಡಿತ್ತು.
ಸುಧೀಂದ್ರ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಆಜೀವ ನಿಷೇಧಕ್ಕೆ ಒಳಗಾದ ಮೂರನೇ ಆಟಗಾರ ಎನಿಸಿದ್ದಾರೆ.

ಶಿಕ್ಷೆಯ ಪ್ರಮಾಣ
ಟಿ.ಪಿ.ಸುಧೀಂದ್ರ
ದೇಶಿ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಲು ಒಪ್ಪಿಗೆ ನೀಡಿದ್ದು ಸಾಬೀತಾಗಿದ್ದರಿಂದ ಸುಧೀಂದ್ರ ಮೇಲೆ ಐದು ವರ್ಷ ನಿಷೇಧ ಹೇರಲಾಗಿದೆ. ಆಂಧ್ರಪ್ರದೇಶದ ಸುಧೀಂದ್ರ 27 ಪ್ರಥಮ ದರ್ಜೆ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ಮಧ್ಯಪ್ರದೇಶ ರಣಜಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ವೇಗಿ 108 ವಿಕೆಟ್ ಕಬಳಿಸ್ದ್ದಿದರು.

ಐಸಿಸಿ, ಬಿಸಿಸಿಐ ಅಥವಾ ಬಿಸಿಸಿಐ ನೋಂದಾಯಿತ ಯಾವುದೇ ಸಂಸ್ಥೆಗಳಡಿಯಲ್ಲಿ ಆಡಲು 28 ವರ್ಷ ವಯಸ್ಸಿನ ಸುಧೀಂದ್ರಗೆ ಅವಕಾಶವಿಲ್ಲ. ಬಿಸಿಸಿಐನ ಯಾವುದೇ ಸೌಲಭ್ಯಕ್ಕೆ ಅವರು ಅರ್ಹರಲ್ಲ. ಜೊತೆಗೆ ಈ ಸಂಸ್ಥೆಗಳಲ್ಲಿ ಅವರು ಜೀವನಪರ್ಯಂತ ಯಾವುದೇ ಹುದ್ದೆ ಹೊಂದುವಂತಿಲ್ಲ.

ಶಲಭ್ ಶ್ರೀವಾಸ್ತವ
ಪಂದ್ಯವೊಂದರಲ್ಲಿ ಮೋಸದಾಟದಲ್ಲಿ ಪಾಲ್ಗೊಳ್ಳಲು ಶ್ರೀವಾಸ್ತವ ಒಪ್ಪಿಕೊಂಡಿದ್ದು ಸಾಬೀತಾಗಿದೆ. ಆದರೆ ಮೋಸದಾಟ ನಡೆದಿರಲಿಲ್ಲ. ಹಾಗಾಗಿ ಅವರ ಮೇಲೆ ಐದು ವರ್ಷ ನಿಷೇಧ ಹೇರಲಾಗಿದೆ. ಉತ್ತರ ಪ್ರದೇಶದ ಪರ 41 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ.

ಈ ಎಡಗೈ ವೇಗಿ 130 ವಿಕೆಟ್ ಪಡೆದಿದ್ದಾರೆ. ಈ ಶಿಕ್ಷೆ ಮುಗಿಯುವವರೆಗೆ ಅವರು ಐಸಿಸಿ, ಬಿಸಿಸಿಐ ಅಥವಾ ಬಿಸಿಸಿಐ ನೋಂದಾಯಿತ ಯಾವುದೇ ಸಂಸ್ಥೆಗಳಡಿಯಲ್ಲಿ ಆಡುವಂತಿಲ್ಲ. ಬಿಸಿಸಿಐನ ಯಾವುದೇ ಸೌಲಭ್ಯಕ್ಕೆ ಅವರು ಅರ್ಹರಲ್ಲ. ಜೊತೆಗೆ ಈ ಸಂಸ್ಥೆಗಳಲ್ಲಿ ಅವರು ಯಾವುದೇ ಹುದ್ದೆ ಹೊಂದುವಂತಿಲ್ಲ.

ಅಮಿತ್ ಯಾದವ್,  ಮೋನಿಷ್ ಮಿಶ್ರಾ, ಅಭಿನವ್ ಬಾಲಿ
ಈ ಮೂವರು ಆಟಗಾರರು ಮೋಸದಾಟದಲ್ಲಿ ಪಾಲ್ಗೊಳ್ಳುವ ಸಂಬಂಧ ಚರ್ಚೆ ನಡೆಸಿದ್ದರು. ಇದರಿಂದ ಕ್ರೀಡೆಯ ಗೌರವಕ್ಕೆ ಧಕ್ಕೆಯಾಗಿದೆ. ಹಾಗಾಗಿ ಒಂದು ವರ್ಷ ನಿಷೇಧ ಹೇರಲು ತೀರ್ಮಾನಿಸಲಾಗಿದೆ.  ಈ ಶಿಕ್ಷೆ ಮುಗಿಯುವವರೆಗೆ ಅವರು ಐಸಿಸಿ, ಬಿಸಿಸಿಐ ಅಥವಾ ಬಿಸಿಸಿಐ ನೋಂದಾಯಿತ ಯಾವುದೇ ಸಂಸ್ಥೆಗಳಡಿಯಲ್ಲಿ ಆಡುವಂತಿಲ್ಲ.
 
ಗೋವಾ ರಣಜಿ ತಂಡದ ಆಲ್‌ರೌಂಡರ್ ಅಮಿತ್ 14 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ. ಬ್ಯಾಟ್ಸ್‌ಮನ್ ಮೋನಿಷ್ ಮಧ್ಯಪ್ರದೇಶದ ಪರ 31 ಪ್ರಥಮ ದರ್ಜೆ ಪಂದ್ಯ ಆಡಿದ್ದಾರೆ. ದೆಹಲಿಯ ಅಭಿನವ್‌ಆಟಗಾರ ಹಿಮಾಚಲ ಪ್ರದೇಶ ರಣಜಿ ತಂಡದಲ್ಲಿ ಆಡುತ್ತಾರೆ.

`ಈ ಆಟಗಾರರ ಮೇಲೆ ಯಾವುದೇ ಕರುಣೆ ತೋರಿಸಬಾರದು. ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಅವರನ್ನು ಇನ್ನಷ್ಟು ಕಠಿಣ ಶಿಕ್ಷೆಗೆ ಗುರಿಪಡಿಸಬೇಕಿತ್ತು~
  ಮಾಜಿ ಆಟಗಾರ ಅರುಣ್ ಲಾಲ್

`ತಪ್ಪಿತಸ್ಥರು ಯಾರೇ ಆಗಲಿ. ಅವರನ್ನು ಇಂತಹ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಆಗ ಉಳಿದ ಕ್ರಿಕೆಟಿಗರೂ ಎಚ್ಚೆತ್ತುಕೊಳ್ಳುತ್ತಾರೆ~ 
 ಸೈಯದ್ ಕಿರ್ಮಾನಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT