ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೆಕ್ಟ್ರಂ ಹಂಚಿಕೆ ಸಂಪುಟ ನಿರ್ಧಾರ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿವಾದಾತ್ಮಕ 2ಜಿ ಟಿಪ್ಪಣಿ ವಿಷಯದಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಗೃಹ ಸಚಿವ ಪಿ. ಚಿದಂಬರಂ ಅವರ ನಡುವೆ `ಕಾರ್ಯನಿರ್ವಹಣಾ ಭಿನ್ನಾಭಿಪ್ರಾಯ~ ಉಂಟಾಗಿರುವುದನ್ನು ಒಪ್ಪಿಕೊಂಡಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ಆದರೆ ಇದು `ಅವರ ಅಭಿಪ್ರಾಯಗಳನ್ನು ತಿಳಿಸುತ್ತದೆಯೇ ಹೊರತು ಪರಸ್ಪರ ಭಿನ್ನಮತವನ್ನಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.

“ಸ್ಪೆಕ್ಟ್ರಂ ಪರವಾನಗಿ ಹಂಚಿಕೆ ಮಾಡುವಾಗ `ಮೊದಲು ಬಂದವರಿಗೆ ಆದ್ಯತೆ~ ಎಂಬ ನಿಯಮವನ್ನು ಗೃಹ ಸಚಿವರು ಪಾಲಿಸಿದ್ದು, ಕೇವಲ ಅವರೊಬ್ಬರೇ ಏಕಪಕ್ಷೀಯವಾಗಿ  ಸಂಪುಟದ ನಿರ್ಧಾರವನ್ನು ಬದಲಿಸಲಾಗದು” ಎಂದು ಭಾನುವಾರ `ಸಿಎನ್‌ಎನ್-ಐಬಿಎನ್ ಟಿವಿ~ ಪ್ರಸಾರ ಮಾಡಿದ ಕರಣ್ ಥಾಪರ್ ಅವರ `ಡೆವಿಲ್ಸ್ ಅಡ್ವೊಕೇಟ್~ ಸಂದರ್ಶನ ಕಾರ್ಯಕ್ರಮದಲ್ಲಿ ಖುರ್ಷಿದ್ ಉತ್ತರಿಸಿದ್ದಾರೆ.
 
`ಚಿದಂಬರಂ ಸಂಪುಟದ ನಿರ್ಧಾರದ ಬಳಿಕವೂ ಹರಾಜಿನ ಮೂಲಕ ಸ್ಪೆಕ್ಟ್ರಂ ಹಂಚಿಕೆಗೆ ಪಟ್ಟು ಹಿಡಿದಿದ್ದರು. ಆದರೆ ಇದೊಂದು ಸಂಪುಟದ ತೀರ್ಮಾನವಾಗಿದ್ದರಿಂದ ಹಣಕಾಸು ಸಚಿವರಾಗಿದ್ದಾಗ ಚಿದಂಬರಂ ಅವರ ಇಚ್ಛೆಗೆ ವಿರುದ್ಧವಾಗಿ ಪ್ರಕ್ರಿಯೆ ನಡೆದಿತ್ತು~ ಎಂದು  ತಿಳಿಸಿದ್ದಾರೆ.

“ಸಂಪುಟದ ತಿರ್ಮಾನದ ಬಗ್ಗೆ ಹಲವು ಸಚಿವರು ಮತ್ತು ಒಬ್ಬ ಸಚಿವರ ಮಧ್ಯೆ ಅಥವಾ ಇಬ್ಬರು ಸಚಿವರ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ, ಅಂತಿಮವಾಗಿ ಬೇರೇನೂ ಮಾಡಲಾಗದೆ, `ಆಯಿತು~ ಎನ್ನದೆ ವಿಧಿಯಿಲ್ಲ” ಎಂದು ಅವರು ಹೇಳಿದ್ದಾರೆ. `ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಚಿದಂಬರಂ ತಪ್ಪಿತಸ್ಥರು~ ಎಂಬ ಬಿಜೆಪಿ ನಾಯಕ ಅರುಣ್ ಜೇಟ್ಲಿಯವರ ಆರೋಪವನ್ನು ಖುರ್ಷಿದ್ ತಳ್ಳಿಹಾಕಿದ್ದಾರೆ.

ಕಡಿಮೆ ದರದಲ್ಲಿ ಸ್ಪೆಕ್ಟ್ರಂ ಹಂಚಿಕೆ ಮಾಡುವ ನಿರ್ಧಾರವನ್ನು 2001ರಲ್ಲಿ ಜೇಟ್ಲಿಯವರ ಎನ್‌ಡಿಎ ಸರ್ಕಾರವೇ ಮಾಡಿದ್ದು, ಈ ದರದಲ್ಲಿ ಇನ್ನೂ ಹೆಚ್ಚಿಗೆ ಲೈಸೆನ್ಸ್ ನೀಡುವ ತೀರ್ಮಾನವನ್ನು 2003ರಲ್ಲಿ ಎನ್‌ಡಿಎ ಸರ್ಕಾರವೇ ಕೈಗೊಂಡಿದ್ದನ್ನು ಅವರು ಸ್ಮರಿಸಿದ್ದಾರೆ.

`ಮೊದಲು ಬಂದವರಿಗೆ ಆದ್ಯತೆ ನೀಡಬೇಕೆಂಬ 2003ರ ಸಚಿವ ಸಂಪುಟದ ತೀರ್ಮಾನವನ್ನೇ ಯುಪಿಎ ಸರ್ಕಾರವೂ ಮುಂದುವರಿಸಿದ್ದು, ಇದೊಂದು ಒಮ್ಮತದ ನಿರ್ಧಾರವಿರುವುದರಿಂದ ಇದರಲ್ಲಿ ಚಿದಂಬರಂ, ರಾಜಾ ಅಥವಾ ಬೇರಾವ ಸಚಿವರೂ ಸ್ವಂತ ತೀರ್ಮಾನ ಕೈಗೊಳ್ಳಲಾಗದು~ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT