ಮದ್ದೂರು: ತಾಲ್ಲೂಕಿನ ಬ್ಯಾಲದಕೆರೆ ಗ್ರಾಮದ ಸ್ಮಶಾನದ ಅಕ್ರಮ ಒತ್ತುವರಿ ತೆರವಿಗೆ ಆಗ್ರಹಿಸಿ ಸೋಮವಾರ ಹೂತಗೆರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಬ್ಯಾಲದಕೆರೆಯಲ್ಲಿ ಇರುವ ಸ್ಮಶಾನವನ್ನು ಒತ್ತುವರಿ ಮಾಡಿ ಕೊಂಡಿರುವುದರಿಂದ ಶವ ಸಂಸ್ಕಾ ರಕ್ಕೆ ಅಗತ್ಯ ಸ್ಥಳಾವಕಾಶ ದೊರಕು ತ್ತಿಲ್ಲ ಎಂದು ಆರೋಪಿಸಿದ ಗ್ರಾಮ ಸ್ಥರು ಅಣಕು ಶವಯಾತ್ರೆ ನಡೆಸಿ, ಗ್ರಾಪಂ ಆವರಣದಲ್ಲಿ ಶವದ ಪ್ರತಿಕೃತಿಯನ್ನು ದಹಿಸಿದರು.
ಗ್ರಾಮದ ಸರ್ವೇ ನಂ. ಆರ್.ಎಸ್.600ರಲ್ಲಿ 1.24 ಗುಂಟೆ ಪ್ರದೇಶವನ್ನು ಸ್ಮಶಾನಕ್ಕೆ ಮೀಸಲಿಡಲಾಗಿದೆ. ಆದರೆ ಈ ಸ್ಥಳವನ್ನು ಗ್ರಾಮದ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಶವ ಸಂಸ್ಕಾರಕ್ಕೆ ಆಡಚಣೆ ಉಂಟಾಗಿದೆ. ಈ ಕೂಡಲೇ ಅಕ್ರಮ ಒತ್ತುವರಿ ತೆರವುಗೊಳಿಸಿ ಸುಗಮ ಸಂಸ್ಕಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಕಾರ್ಯನಿರ್ವಾಹಕಾಧಿಕಾರಿ ಶಮಂತ್ಕುಮಾರ್, ಪಿಡಿಓ ಚನ್ನಯ್ಯ, ಕಾರ್ಯದರ್ಶಿ ರಾಮಲಿಂಗಯ್ಯ ಉದ್ರಿಕ್ತ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. ಸ್ಮಶಾನದ ಸ್ಥಳವನ್ನು ಪುನರ್ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸುವುದಾಗಿ ಭರವಸೆ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಗ್ರಾಮದ ಮುಖಂಡರಾದ ಕೆಂಪರಾಜು, ನಂಜುಂಡಯ್ಯ, ರಾಜೇಶ್, ಉಮೇಶ್, ಕುಮಾರ್, ಎಂ.ರಾಜಣ್ಣ, ರಾಮಚಂದ್ರು, ನಾಗರಾಜು, ಜಗದೀಶ್, ಎಂ.ಚಿಕ್ಕಚನ್ನೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.