ಇದು ಅನಾಥಾಶ್ರಮದ ಮಕ್ಕಳು ರೆಸ್ಟೊರೆಂಟ್ ಉದ್ಘಾಟಿಸಿದ ಅಪರೂಪದ ಪ್ರಸಂಗ. ನಡೆದದ್ದು ಎಚ್ಎಸ್ಆರ್ ಬಡಾವಣೆಯ 27ನೇ ಮುಖ್ಯರಸ್ತೆಯಲ್ಲಿ.ಅಲ್ಲಿ `ಟೊಮಾಟಿನಾ~ ಎಂಬ ಅಪ್ಪಟ ಸಸ್ಯಹಾರಿ ರೆಸ್ಟೊರೆಂಟ್ ಪ್ರಾರಂಭಿಸಿದ್ದಾರೆ ಹಿಮಾಂಶು ಮತ್ತು ಅವರ ಮಗಳು ರೋಶಿನಿ ಸಂಘ್ವಿ.
ಆರಂಭೋತ್ಸವದಲ್ಲಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿ ತಾರೆಗಳಾದ ಪೂಜಾ ಗಾಂಧಿ, ರಾಧಿಕಾ ಗಾಂಧಿ, ಭುವನ್, ರೂಪಶ್ರೀ ಭಾಗವಹಿಸಿದ್ದರು.
ಆದರೆ ಉದ್ಘಾಟನೆ ನೆರವೇರಿಸಿದವರು ಕಮ್ಮನಹಳ್ಳಿಯ ಸ್ಮೈಲ್ ಪ್ರತಿಷ್ಠಾನದ ಅನಾಥಾಲಯ 30 ಮಕ್ಕಳು.
ನಂತರ ಪಟಾಕಿ ಹಚ್ಚಿ ಸಂಭ್ರಮಪಟ್ಟರು. ಚಿತ್ರತಾರೆಗಳ ಜತೆ ಫೋಟೊ ತೆಗೆಸಿಕೊಂಡರು. ಪುಷ್ಕಳ ಭೋಜನದ ಜತೆ ಆಟಿಗೆಗಳೂ ಸಿಕ್ಕಾಗ ಮಕ್ಕಳ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು.
ಹೆಸರಿಗೆ ತಕ್ಕಂತೆ ಟೊಮಾಟಿನಾದ ಒಳಾಲಂಕಾರದಲ್ಲಿ ದಟ್ಟ ಗುಲಾಬಿ ಬಣ್ಣ ಎದ್ದು ಕಾಣುತ್ತದೆ. ಉತ್ತರ ಭಾರತೀಯ, ಚೀನಿ ಮತ್ತು ಕಾಂಟಿನೆಂಟಲ್ನ ಬಗೆಬಗೆಯ ಖಾದ್ಯಗಳನ್ನು ಇಲ್ಲಿ ಸವಿಯಬಹುದು.
ಇಲ್ಲಿ ಯಾವುದೇ ಅಡುಗೆಗೂ ಕೃತಕ ರಾಸಾಯನಿಕ ಬಳಸುವುದಿಲ್ಲ. ಸ್ಥಳೀಯ ಬೆಳೆಗಾರರಿಂದ ನೇರವಾಗಿ ಆಹಾರೋತ್ಪನ್ನ ಖರೀದಿಸಲಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿ ರಹಿತ ಜೈನ್ ಅಡುಗೆ ನಮ್ಮ ವಿಶೇಷ ಎನ್ನುತ್ತಾರೆ ರೋಶಿನಿ.