ಬೆಳಗಾವಿ: ಪ್ರತಿಭಾವಂತ ಪದವೀಧರರಿಗೆ ಸೂಕ್ತ ತರಬೇತಿ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಿ ಅವರು ಸ್ವಂತ ಉದ್ದಿಮೆ ಆರಂಭಿಸಲು ಅನುಕೂಲವಾಗುವಂತೆ ವಿಶೇಷ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಭಾನುವಾರ ಇಲ್ಲಿ ತಿಳಿಸಿದರು.ಗೋಮಟೇಶ ವಿದ್ಯಾಪೀಠದ ಸುವರ್ಣ ಮಹೋತ್ಸವದ ಎರಡನೇ ದಿನದ ಸಮಾರಂಭದಲ್ಲಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಉನ್ನತ ಶಿಕ್ಷಣ ಪಡೆದ ಪದವೀಧರರು ಉದ್ಯೋಗಕ್ಕಾಗಿ ಅಲೆಯುವುದನ್ನು ತಪ್ಪಿಸಲು ಹಾಗೂ ಅವರ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ.ಇದರಿಂದ ರಾಜ್ಯದಲ್ಲಿ ಉದ್ಯೋಗ ಯುಗವೇ ತೆರೆದುಕೊಳ್ಳಲಿದೆ ಎಂದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಮಠಮಾನ್ಯಗಳು, ಸಂಸ್ಥೆಗಳು ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಸೇವೆ ನೀಡುತ್ತಿವೆ.ಗೋಮಟೇಶ ವಿದ್ಯಾಪೀಠ ಉತ್ತಮ ಸಾಧನೆ ಮಾಡುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆ ಹುಟ್ಟು ಹಾಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಈರಣ್ಣ ಕಡಾಡಿ ಹಾಗೂ ಭರತೇಶ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಗೋಪಾಲ ಜಿನಗೌಡ ಮಾತನಾಡಿದರು. ವಿದ್ಯಾಪೀಠದ ಮುಖ್ಯಸ್ಥ ಶಾಸಕ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾಪೀಠದ ನಿರ್ದೇಶಕರಾದ ಸನತ್ಕುಮಾರ, ದೀಲಿಪ ಪಾಟೀಲ, ಪಿ.ಯು. ಕಾಲೇಜಿನ ಪ್ರಾಚಾರ್ಯೆ ಶಿಲ್ಪಾ ವೈಬಿ, ಟಿ.ಬಿ. ಹನಮಗೌಡ, ಉಮೇಶ ಮಹಾಬಳ ಶೆಟ್ಟಿ ಅವರು ಉಪಸ್ಥಿತರಿದ್ದರು.