ಚಿಕ್ಕಜಾಜೂರು: ಬಿ.ದುರ್ಗ ಹೋಬಳಿಯ ಚಿಕ್ಕಜಾಜೂರು, ಅಂದನೂರು, ಚಿಕ್ಕಎಮ್ಮಿಗನೂರು, ಕಾಟಯ್ಯನ ಕೆರೆಗಳಲ್ಲಿ ಕಳೆದ 3 ತಿಂಗಳುಗಳಿಂದ ರೈತರೇ ಹೂಳೆತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ನವೆಂಬರ್ ತಿಂಗಳಿನ ಮಧ್ಯದಿಂದಲೇ ರೈತರು ಸ್ವಂತ ಖರ್ಚಿನಿಂದ ಹೂಳೆತ್ತುವ ಕಾರ್ಯ ಆರಂಭಿಸಿದ್ದಾರೆ. ಪ್ರತಿ ದಿನ 40-50 ಟ್ರ್ಯಾಕ್ಟರ್ ಹಾಗೂ 4-5 ಟಿಪ್ಪರ್ಗಳಲ್ಲಿ ರೈತರು ತಮ್ಮ ಹೊಲ-ತೋಟಗಳಿಗೆ ಮಣ್ಣನ್ನು ಏರಿಸುತ್ತಿದ್ದಾರೆ. ಪ್ರತಿಯೊಂದು ಕೆರೆಯಲ್ಲೂ 2-3 ಜೆಸಿಬಿ, ಹಿಟಾಚಿ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಪ್ರತಿ ಟ್ರ್ಯಾಕ್ಟರ್ ಟ್ರಿಪ್ ಒಂದಕ್ಕೆ ರೂ. 50-75ಗಳನ್ನು, ಟಿಪ್ಪರ್ ಒಂದಕ್ಕೆ ರೂ. 150ನ್ನು ಜೆಸಿಬಿ/ಹಿಟಾಚಿ ಯಂತ್ರಗಳ ಮಾಲೀಕರಿಗೆ ನೀಡಿ ಮಣ್ಣನ್ನು ತಮ್ಮ ಹೊಲ-ತೋಟಗಳಿಗೆ ಏರಿಸುತ್ತಿದ್ದಾರೆ. ಇಲ್ಲಿಯವರೆಗೆ ಹೋಬಳಿಯ ರೈತರು ಯಂತ್ರ ಮತ್ತು ವಾಹನಗಳ ಬಾಡಿಗೆ ಎಂದು ಸುಮಾರು ರೂ. 1ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ.
ಹೋಬಳಿಯ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಜಿಲ್ಲಾಧಿಕಾರಿ ಈ ಕೆರೆಗಳ ಖುದ್ದು ಪರಿಶೀಲನೆ ನಡೆಸಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದೂ ಹಾಗೂ ಇದರ ಲಾಭವನ್ನು ಯಾವುದೇ ರಾಜಕೀಯ ಹಿತಾಸಕ್ತಿಗಳಿಗೆ ನೀಡಬಾರದು ಎಂದು ಹೋಬಳಿಯ ರೈತರು ಮನವಿ ಮಾಡಿದ್ದಾರೆ.