ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತಿಕೆಯ ಹಂಬಲ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಿತ್ರ: ಗವಿಪುರ

ಗೋಕುಲಾಷ್ಠಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ? ಎಂಬ ಗಾದೆ ಮಾತಿನಂತಿದೆ `ಗವಿಪುರ~ ಚಿತ್ರ. ಚಿತ್ರದಲ್ಲಿ ನಾಯಕ, ನಾಯಕಿಗಾಗಲೀ, ನಡೆಯುವ ಕಥೆಗಾಗಲೀ ಎ್ಲ್ಲಲೂ  ಗವಿಪುರದ ಉ್ಲ್ಲಲೇಖ ಇಲ್ಲ. ಆದರೂ ಜಾತಿ ಮೀರಿ ಪ್ರೀತಿ ದೊಡ್ಡದು, ದ್ವೇಷ ಮೀರಿದ ಸಂಬಂಧ ದೊಡ್ಡದು ಎಂಬ ಸಂದೇಶ ಸಾರಲು `ಗವಿಪುರ~ದಲ್ಲಿ ನಿರ್ದೇಶಕರು ಪ್ರಯತ್ನಪಟ್ಟಿದ್ದಾರೆ.

ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ ಹಾಗೂ ಜಾತಿ ಪದ್ಧತಿಯಲ್ಲಿ ನಂಬಿಕೆ ಇಲ್ಲದ ಸಮಾಜವಾದಿ ಅರ್ಚಕರ ಮಗ ಚಿತ್ರದ ನಾಯಕ. ಅವನೂ ವೈದಿಕ ವೃತ್ತಿಯನ್ನೇ ರೂಢಿಸಿಕೊಂಡು ಅಪ್ಪನ ಹಾದಿಯಲ್ಲೇ ಮುಂದುವರಿಯುತ್ತಾನೆ. ಅವನಿಗೆ ಬೇರೆ ಜಾತಿಯ ಶ್ರೀಮಂತ ನಾಯಕಿಯಲ್ಲಿ ಅನುರಾಗ ಮೂಡುತ್ತದೆ. ಎರಡು ಕುಟುಂಬಗಳ ಒಪ್ಪಿಗೆ ಇದ್ದರೂ, ಈ ಪ್ರೇಮಕ್ಕೆ ನಾಯಕಿಯ ಅಣ್ಣನ ವಿರೋಧವಿದೆ. ನಾಯಕ ಹಾಗೂ ಅವನ ಕುಟುಂಬದ ಮೇಲೆ ನಾಯಕಿಯ ಅಣ್ಣನಿಂದ ಹಲ್ಲೆಯೂ ನಡೆಯುತ್ತದೆ. ಅವರಿಬ್ಬರ ನಡುವೆ ವಿವಾಹ ನಡೆಯುತ್ತದೆಯೇ ಎಂಬ ಅಂದಕಾಲತ್ತಿಲ್ ಕಥೆಯನ್ನು ಸಿನಿಮಾ ಮಾಡಲಾಗಿದೆ.

ಚಿತ್ರ ನೋಡುತ್ತಿದ್ದಂತೆ ಕನ್ನಡದಲ್ಲೇ ಬಂದುಹೋದ ಹಲವು ಚಿತ್ರಗಳ ನೆರಳುಪ್ರೇಕ್ಷಕನಿಗೆ ಕಂಡಂತೆನಿಸುತ್ತದೆ. ಖಳನಾಯಕನ ಹೊಡೆತದಿಂದ ಜರ್ಝರಿತನಾದ ನಾಯಕನಿಗೆ `ಹೊಡೆದಾಡು~ ಎಂದು ಪ್ರೇರೇಪಿಸುವ ನಾಯಕಿಯ ಮಾತನ್ನು ಕೇಳಿದಾಗ `ಓಂ~ ಚಿತ್ರ ನೆನಪಾಗದೇ ಇರುವುದಿಲ್ಲ. ಆ ಸಂದರ್ಭದಲ್ಲಿ ಹೊಡೆದಾಡುವ ನಾಯಕನಲ್ಲಿ ರೌಡಿಯಾಗುವ ಸಾಧ್ಯತೆ ಬದಲಿಸಿ ನಿರ್ದೇಶಕರು ಬೇರೆ ಆಯಾಮ ನೀಡಿದ್ದಾರೆ. ಈ ಕೆಲವು ಸನ್ನಿವೇಶಗಳಲ್ಲಿ ನಿರ್ದೇಶಕ ಕುಮಾರ್ ಸ್ವಂತಿಕೆ ಕಾಣುತ್ತದೆ.

ಒಂದೆಡೆ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವರಾಂ ಅವರ ಮೂಲಕ ತತ್ವ ಹಾಗೂ ಗಾದೆ ಮಾತುಗಳನ್ನು ಕೇಳಿಸಿರುವ ನಿರ್ದೇಶಕರು, ಮತ್ತೊಂದೆಡೆ ಖಳನಾಯಕರಿಂದ ತದ್ವಿರುದ್ಧಸಂಭಾಷಣೆ ಹೇಳಿಸಿದ್ದಾರೆ. `ಮುಂಗಾರು ಮಳೆ~ ಸಿನಿಮಾದ ಕೆಲ ಸಂಭಾಷಣೆಗಳನ್ನೇ ಯಥಾವತ್ತಾಗಿ ಬಳಸಿ ಟೆನ್ನಿಸ್ ಕೃಷ್ಣ ಅವರಿಂದ ಹೇಳಿಸುವ ಪ್ರಯತ್ನ ಹಾಗೂ ಅದಕ್ಕೆ ಹಾಸ್ಯದ ಹೊರಮೈ ಹೊದಿಸಿರುವ ರೀತಿ ಪೇಲವವಾಗಿದೆ. ಕಥೆಯ ಸನ್ನಿವೇಶದಲ್ಲೇ ಹಾಸ್ಯವನ್ನು ಬೆರೆಸುವ ಬದಲು ಆಗಾಗ್ಗೆ ಅವುಗಳನ್ನು ಬಲವಂತವಾಗಿ ತುರುಕಲಾಗಿದೆ. ಇಂಥದೇ ಹೇರುವಿಕೆ, ಐಟಂ ನೃತ್ಯ.

ನಟನೆಯಲ್ಲಿ ಹಿರಿಯರ ಮುಂದೆ ಕಿರಿಯರು ತೀರಾ ನಾಟಕೀಯ ಅಥವಾ ಸಪ್ಪೆ ಎನಿಸುತ್ತದೆ. ಹಿರಿಯ ಕಲಾವಿದರಾದ ಶಿವರಾಂ, ಸುಮಿತ್ರಾ, ಶರತ್ ಲೋಹಿತಾಶ್ವ, ಸಂಗೀತಾ ಅವರದ್ದು ಅನುಭವಕ್ಕೆ ತಕ್ಕ ನಟನೆ. ನಾಯಕ ಸೂರಜ್ ಸಾಸನೂರ್ ಅವರ ನಟನೆ ಸಾಹಸ ಸನ್ನಿವೇಶಗಳಲ್ಲಿ ಮಾತ್ರ ನೋಡುವಂತಿದೆ. ಬಹುಶಃ ಇದಕ್ಕೆ ಡಿಫರೆಂಟ್ ಡ್ಯಾನಿ ಅವರ ಉತ್ತಮ ಸಾಹಸ ನಿರ್ದೇಶನವೂ ಕಾರಣವಿರಬಹುದು. ಸೌಜನ್ಯ ಅವರು ಪ್ರಣಯ ದೃಶ್ಯಗಳಲ್ಲಿ ಕೊಂಚ ಮುಂದೆ, ಉಳಿದಂತೆ ಹಿಂದೆ. ಸೀಮಿತ ನಟನಾ ವರ್ಗವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಬಳಸಿಕೊಂಡು ಸಿನಿಮಾ ರೂಪಿಸಿರುವುದು ಉತ್ತಮ ಪ್ರಯತ್ನ.

ಚಿತ್ರದಲ್ಲಿ ಕಥೆಗೊಂದು ವೇಗವಿದೆ. ಆದರೆ ಸನ್ನಿವೇಶಗಳಿಂದ ಸನ್ನಿವೇಶಕ್ಕೆ ದಾಟುವಾಗ ಕೆಲವೊಮ್ಮೆ ಲಯ ತಪ್ಪುತ್ತದೆ. ತರ್ಕವೇ ಇಲ್ಲದ ಕೆಲ ಸನ್ನಿವೇಶಗಳಿಂದಾಗಿ ಸಿನಿಮಾ ಹಳಿ ತಪ್ಪಿ, ಮತ್ತೆ ಹಳಿಗೆ ಬಂದು ಸಾಗುತ್ತದೆ. ನ್ಯೂನತೆಗಳ ನಡುವೆಯೂ ಚಿತ್ರಕ್ಕೆ ಸುಂದರ ಹಾಗೂ ತರ್ಕಬದ್ಧ ಅಂತ್ಯ ನೀಡಿರುವುದು ಗಮನಾರ್ಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT