ಭಗವಾನ್ ಶ್ರಿ ಜಿಹ್ವೇಶ್ವರ ಜಯಂತಿಯ ಅಂಗವಾಗಿ ಸಂಯುಕ್ತ ಸ್ವಕುಳ ಸಾಳಿ ಮಹಿಳಾ ಮಂಡಳಿಯ ವತಿಯಿಂದ ಮಾಗಡಿ ರಸ್ತೆ ಟೋಲ್ಗೇಟ್ ಬಳಿಯ ಪ್ರಮೀಳಾಬಾಯಿ ಮಾನೆ ಬಿಬಿಎಂಪಿ ಶಾಲಾ ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಸಲಾಯಿತು.
ಸ್ವಕುಳ ಸಾಳಿ ಕುಟುಂಬಗಳ ಪುರುಷರು, ಮಹಿಳೆಯರು ಹಾಗೂ ಮಕ್ಕಳು 15 ವಿವಿಧ ಕ್ರೀಡಾಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ವೈದ್ಯೆ ಡಾ. ವಸುಂಧರಾ ಭೂಪತಿ, ಮಂಡಳಿಯ ಅಧ್ಯಕ್ಷೆ ಡಾ. ಪುಷ್ಪಾ ಕ್ಷೀರಸಾಗರ, ಪಾಲಿಕೆ ಸದಸ್ಯ ಎಚ್. ರವೀಂದ್ರ, ಬೆಸ್ಕಾಂ ಎಸ್ಪಿ ಸಿ.ಎನ್. ಭಂಡಾರೆ, ಗುರುನಾಥ ಕಾಂಬಳೆ, ಸುಭಾಷ್ ಕೆಂದೋಳೆ ಮತ್ತಿತರರು ಹಾಜರಿದ್ದರು.
ಈಗಿನ ಪರಿಸರದಲ್ಲಿ ಪೋಷಕರು, ಶಾಲಾ ಕಾಲೇಜುಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆಯೇ ಹೊರತು ಕ್ರೀಡೆ ಹಾಗೂ ಪೌಷ್ಟಿಕ ಆಹಾರದ ಕಡೆ ಗಮನ ಕೊಡುವುದು ತುಂಬಾ ವಿರಳ.
ಆದರೆ ಆರೋಗ್ಯದ ದೃಷ್ಟಿಯಿಂದ ಹಾಗೂ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗಾಗಿ ವಿದ್ಯಾಭ್ಯಾಸದೊಡನೆ ವ್ಯಾಯಾಮ, ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜಿಸುವುದು ಅಗತ್ಯ ಎಂದು ವಸುಂಧರಾ ಹೇಳಿದರು.
ಈ ಸಂದರ್ಭದಲ್ಲಿ ರೇಷ್ಮೆ ಉದ್ಯಮಿ ಪ್ರೇಮಾ ಶಿವರಾಂ ಸವ್ವಾಸೇರೆ ಹಾಗೂ ಕಪಿಲೇಶ್ವರ ದೇವಸ್ಥಾನದ ಧರ್ಮದರ್ಶಿ ಗೌರಮ್ಮ ರಾಮಕೃಷ್ಣ ಏಕಬೋಟೆಯವರನ್ನು ಸನ್ಮಾನಿಸಲಾಯಿತು.