ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾ.ಪಂ. ವತಿಯಿಂದ ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ಅಂಗವಾಗಿ ಜನ ಜಾಗೃತಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.ಆಂದೋಲನದ ಅಂಗವಾಗಿ ಗ್ರಾಮದಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಸಪ್ತಾಹಕ್ಕೆ ಚಾಲನೆ ನೀಡಿದ ದೊಡ್ಡಬೆಳವಂಗಲ ಗ್ರಾ.ಪಂ. ಅಧ್ಯಕ್ಷ ಮುನಿರಾಜು ಮಾತನಾಡಿ, `ಗ್ರಾಮಗಳಲ್ಲಿ ನೈರ್ಮಲ್ಯದ ಕೊರತೆಯಿಂದಾಗಿ ಹಲವಾರು ಸಮಸ್ಯೆಗಳು ಎದುರಾಗಿವೆ.
ಶೌಚಾಲಯಗಳನ್ನು ಬಳಸುವ ಬಗ್ಗೆ ಇನ್ನೂ ಗ್ರಾಮೀಣರಿಗೆ ಸಂಪೂರ್ಣ ಅರಿವು ಆಗಿಲ್ಲ. ಶೌಚಾಲಯದಿಂದ ಆರೋಗ್ಯ ಉತ್ತಮಗೊಳಿಸಲು ಸಾಧ ಎಂದರು. ಜನ ಜಾಗೃತಿ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳು ಹಾಗೂ ಗ್ರಾಮದ ಮುಖಂಡರಿಂದ ಜಾಗೃತಿ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಶಿಧರ್, ಗ್ರಾ.ಪಂ. ಸದಸ್ಯರಾದ ಡಿ.ಎಂ.ನಾಗರಾಜ್, ಅನುರಾಧ, ಮುನಿಯಪ್ಪ, ಕುಮಾರಸ್ವಾಮಿ, ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಿ.ಎಚ್.ರಾಮಕೃಷ್ಣಯ್ಯ, ಬೈಲಾಂಜನೇಯಮೂರ್ತಿ, ಲೋಕ ಶಿಕ್ಷಣ ಸಮಿತಿಯ ಸಿಸ್ಟರ್ ಲೀನಾ ಮುಂತಾದವರು ಭಾಗವಹಿಸಿದ್ದರು.