ಹಿರಿಯೂರು: ಸಂಪೂರ್ಣ ಆರೋಗ್ಯದ ಹಿನ್ನೆಲೆಯಲ್ಲಿ ಮಕ್ಕಳು ವೈಯಕ್ತಿಕ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ವೈದ್ಯಾಧಿಕಾರಿ ಡಾ. ಎಸ್.ಎನ್. ರಾಜಶೇಖರ್ ಕರೆ ನೀಡಿದರು.ತಾಲ್ಲೂಕಿನ ಬೇತೂರು ಪಾಳ್ಯ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ಹದಿಹರೆಯದವರ ಶಿಕ್ಷಣ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀಯರಿಗೆ ಪುರುಷರಿಗಿಂತ ಭಿನ್ನ ಸಮಸ್ಯೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಹಿರಿಯರಾದವರು ಪ್ರಾಪ್ತ ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿಕೊಡಬೇಕು. ಇಂತಹ ವಿಚಾರದಲ್ಲಿ ಮುಜುಗರಪಡುವ ಅಗತ್ಯವಿಲ್ಲ.ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಪ್ರತೀ ಗುರುವಾರ ಮಧ್ಯಾಹ್ನ ‘ಸ್ನೇಹ ಕ್ಲಿನಿಕ್’ ಸೌಲಭ್ಯವಿದ್ದು, ಗ್ರಾಮಸ್ಥರು ತಮ್ಮ ನ್ಯೂನತೆಗಳ ಬಗ್ಗೆ ವೈದ್ಯರ ಜತೆ ಗುಪ್ತವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ವಾಣಿ ವಿಲಾಸಪುರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮಾ ಸಲಹೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್, ಹಿರಿಯ ಆರೋಗ್ಯ ಸಹಾಯಕ ಖಾಸಿಂಸಾಬ್, ಕಿರಿಯ ಆರೋಗ್ಯ ಸಹಾಯಕ ಮಲ್ಲಿಕಾರ್ಜುನ್, ಓಂಕಾರಮ್ಮ, ಕೆ. ರಾಧಮ್ಮ, ಹೇಮಂತ್ಕುಮಾರ್, ಲಿಂಗಯ್ಯ, ರಂಗಪ್ಪ, ಹನುಮೇಶ್, ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.