ಗದಗ: ನಮ್ಮ ಮನೆ, ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡು, ಅದರಲ್ಲಿ ದೇವರನ್ನು ಕಾಣಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕಿವಿಮಾತು ಹೇಳಿದರು.ಗದುಗಿನ ರಾಜೀವಗಾಂಧಿ ನಗರದ ಎಚ್.ಟಿ.ಕುಲಕರ್ಣಿ ಶಿಕ್ಷಕರ ಬಡಾವಣೆಯಲ್ಲಿ ಸೋಮವಾರ ಮಾರುತಿ ದೇವರ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಪರಿಸರವನ್ನು ಕಾಪಾಡಿಕೊಂಡರೆ ಎಲ್ಲರ ಆರೋಗ್ಯವೂ ಚೆನ್ನಾಗಿ ಇರುತ್ತದೆ. ಆರೋಗ್ಯ ಉತ್ತಮವಾಗಿದ್ದಾಗ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು. ಮಾನವ ಸಂಪನ್ಮೂಲವೂ ಸದೃಢವಾಗಿರುತ್ತದೆ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟರು.ದೇವಸ್ಥಾನಗಳನ್ನು ಕಟ್ಟುವುದು, ಮೂರ್ತಿ ಪ್ರತಿಷ್ಠಾಪನೆ ಮಾಡುವುದು ದೊಡ್ಡ ವಿಷಯವೆನಲ್ಲ. ಆದರೆ ಕಟ್ಟಿದ ದೇವಸ್ಥಾನದಲ್ಲಿ ಪ್ರತಿನಿತ್ಯ ಪೂಜೆಯಾಗುವ ಹಾಗೇ ಸ್ಥಳೀಯ ಜನರು ನೋಡಿಕೊಳ್ಳಬೇಕು. ಪ್ರಾರಂಭಗೊಂಡ ಮೊದಲ ಕೆಲವು ದಿನ ಉತ್ಸಾಹದಿಂದ ದೇವಸ್ಥಾನಕ್ಕೆ ಬಂದು, ಸ್ವಲ್ಪ ದಿನವಾದರೆ ಇತ್ತ ತಲೆ ಹಾಕದಂತಹ ಪರಿಸ್ಥಿತಿ ನಿರ್ಮಾಣ ವಾಗಬಾರದು. ದೇವಸ್ಥಾನವನ್ನು ಹಾಳುಗೆಡವ ಬಾರದು ಎಂದು ಬುದ್ಧಿಮಾತು ಹೇಳಿದರು.
ದೇವಸ್ಥಾನಗಳನ್ನು ಸ್ವಚ್ಛವಾಗಿ ಇಡಲು ಬಡಾವಣೆಯ ನಾಗರಿಕರೆಲ್ಲರೂ ಶ್ರಮಿಸಬೇಕು. ಪ್ರತಿನಿತ್ಯ, ಹಬ್ಬ-ಹರಿದಿನಗಳಲ್ಲಿ ಪೂಜೆ ನಡೆಯಬೇಕು ಎಂದರು.ಸಚಿವ ಸಿ.ಸಿ. ಪಾಟೀಲ ದಾನಿಗಳ ಫಲಕ ಅನಾವರಣ ಮಾಡಿದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಸಾನ್ನಿಧ್ಯ ವಹಿಸಿದ್ದರು. ಮಾರುತಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಎಸ್.ಶಿವನಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಶ್ರೀಶೈಲಪ್ಪ ಬಿದರೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಕಾಂತ ಖಟವಟೆ, ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ಸಿರಾಜ್ ಬಳ್ಳಾರಿ, ಎಲ್.ಡಿ.ಚಂದಾವರಿ, ವಿಜಯಕುಮಾರ ಗಡ್ಡಿ, ಕೆ.ವಿ.ಹಂಚಿನಾಳ, ಆಯ್ಯಪ್ಪ ನಾಯ್ಕರ ಮತ್ತಿತರರು ಹಾಜರಿದ್ದರು.