ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ಸಂಕ್ಷಿಪ್ತ ಸುದ್ದಿಗಳು

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸ್ವಗ್ರಾಮದಲ್ಲಿ ಪ್ರಣವ್ ನವರಾತ್ರಿ ಆಚರಣೆ
ಸುರಿ (ಪ.ಬಂಗಾಳ) (ಪಿಟಿಐ):
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಸ್ವಗ್ರಾಮ ಮಿರಿತಿಯಲ್ಲಿ ದುರ್ಗಾ ದೇವಿಗೆ ಪೂಜೆ ಸಲ್ಲಿಸಲಿದ್ದಾರೆ.

ಮುಖರ್ಜಿಯವರ ಪೂರ್ವಜರು ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯ ಮಿರಿತಿಯಲ್ಲಿದ್ದು, ಪ್ರತಿ ವರ್ಷ ದುರ್ಗಾ ಪೂಜೆಯ ಸಂದರ್ಭದಲ್ಲಿ ಪ್ರಣವ್ ಅಲ್ಲಿಗೆ ತೆರಳಿ ದೇವಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೋಲ್ಕತ್ತದಿಂದ 240 ಕಿ.ಮೀ ದೂರದಲ್ಲಿರುವ ಮಿರಿತಿಗೆ ಹೆಲಿಕಾಪ್ಟರ್ ಮೂಲಕ ಅ.20ರಂದು ತಲುಪಲಿದ್ದಾರೆ ಹಾಗೂ 23ರ ವರೆಗೆ ಇಲ್ಲಿಯೇ ಇದ್ದು ಪೂಜೆ ನಡೆಸಲಿದ್ದಾರೆ ಎಂದು ಜಿಲ್ಲಾ ಮಾಜಿಸ್ಟ್ರೇಟ್ ಜಗದೀಶ್ ಪ್ರಸಾದ್ ಮೀನಾ ತಿಳಿಸಿದ್ದಾರೆ.

ಮಧ್ಯ ಪ್ರದೇಶ, ಛತ್ತೀಸ್‌ಗಡದಲ್ಲಿ ಲಘು ಭೂಕಂಪನ
ಜಬಲ್ಪುರ/ ರಾಯಪುರ (ಪಿಟಿಐ):
ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಗುರುವಾರ ಲಘು ಪ್ರಮಾಣದ ಭೂಕಂಪನ ಸಂಭವಿಸಿದೆ. ಈ ಭೂಕಂಪನದಿಂದ  ಜೀವ ಹಾಗೂ ಆಸ್ತಿಗೆ ಹಾನಿ ಆಗಿಲ್ಲ ಎಂದು ವರದಿ ತಿಳಿಸಿದೆ.  ಭೂಕಂಪನ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5ರಷ್ಟಿತ್ತು.

ಆರು ಸಿಆರ್‌ಪಿಎಫ್ ಸಿಬ್ಬಂದಿ ಬಲಿ
ಗಯಾ/ ಬಿಹಾರ (ಪಿಟಿಐ):
ಮಾವೊವಾದಿಗಳು ಸುಧಾರಿತ ಸ್ಫೋಟಕಗಳನ್ನು ಬಳಸಿ ನೆಲಬಾಂಬ್ ಸ್ಫೋಟಿಸಿದ್ದರಿಂದ ನಕ್ಸಲ್ ನಿಗ್ರಹ ದಳದ ವಾಹನಕ್ಕೆ ಹಾನಿಯಾಗಿದ್ದು, ಕೇಂದ್ರ ಮೀಸಲು ಪಡೆಯ ಆರು ಪೊಲೀಸರು ಮೃತಪಟ್ಟಿರುವ ಘಟನೆ ಗುರುವಾರ ಗಯಾ ಜಿಲ್ಲೆಯ ಬಾರಹ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ: ಮಾವೊವಾದಿಗಳ ವಿರುದ್ಧ ಕಾರ್ಯಾಚರಣೆಗಾಗಿ 12 ಮಂದಿ ಸಿಆರ್‌ಪಿಎಫ್ ಯೋಧರು ತೆರಳುತ್ತಿದ್ದ ಸಂದರ್ಭದಲ್ಲಿ ಬೆಳಿಗ್ಗೆ 6.20ರ ಸುಮಾರಿಗೆ ಮಾವೊವಾದಿಗಳು ಸುಧಾರಿತ ಸ್ಫೋಟಕಗಳನ್ನು ಬಳಸಿ ನೆಲಬಾಂಬ್ ಸ್ಫೋಟಿಸಿದ್ದಾರೆ ಎಂದು ಮಗಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಘಟನೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಐದು ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದು. ತೀವ್ರವಾಗಿ ಗಾಯಗೊಂಡಿದ್ದ ನಾಲ್ವರನ್ನು ಹೆಲಿಕಾಪ್ಟರ್ ನೆರವಿನಿಂದ ಚಿಕಿತ್ಸೆಗಾಗಿ ಪಟ್ನಾಕ್ಕೆ ಕರೆದೊಯ್ಯಲಾಗಿದೆ. ಉಳಿದ ಗಾಯಾಳುಗಳನ್ನು ಮಗಧ ಅನುಗ್ರಹ ನಾರಾಯಣ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಖಾನ್ ಹೇಳಿದರು.

ರಾಷ್ಟ್ರಪತಿ ಭೇಟಿ ಮಾಡಿದ ರಾಹುಲ್
ನವದೆಹಲಿ (ಪಿಟಿಐ):
ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಅವರು ಗುರುವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಸುಮಾರು 30 ನಿಮಿಷಗಳ ಕಾಲ ಚರ್ಚೆ ನಡೆಸಿರುವುದು, ಕೇಂದ್ರ ಸಂಪುಟ ಪುನರ್‌ರಚನೆ ಮತ್ತಷ್ಟು ಖಚಿತವಾದಂತೆ ಆಗಿದೆ.

ರಾಹುಲ್ ರಾಷ್ಟ್ರಪತಿ ಜತೆ ಯಾವ ವಿಷಯ ಚರ್ಚಿಸಿದರು ಎಂದು ತಿಳಿದು ಬಂದಿಲ್ಲ. ಮಂಗಳವಾರ  ಪ್ರಧಾನಿ ಸಿಂಗ್ ಹಾಗೂ ಸೋನಿಯಾ ಗಾಂಧಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದ್ದರು.
 ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರೂ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಭದ್ರತೆಗೆ ಸಂಬಂಧಿಸಿದಂತೆ ಪ್ರಣವ್‌ಗೆ ಮಾಹಿತಿ ನೀಡಿದರು.

ಪಿಂಚಣಿ ಹೆಚ್ಚಳ

ನವದೆಹಲಿ (ಪಿಟಿಐ): ಬಡತನ ರೇಖೆ ಕೆಳಗಿನ ಕುಟುಂಬಗಳಿಗೆ ನೀಡಲಾಗುತ್ತಿರುವ ಕೇಂದ್ರ ಯೋಜನೆಯಾದ ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ವೇತನ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಅಂಗವಿಕಲರ ಪಿಂಚಣಿ ಯೋಜನೆಯಡಿ ನೀಡಲಾಗುತ್ತಿರುವ ಪಿಂಚಣಿ ಮೊತ್ತವನ್ನು ತಿಂಗಳಿಗೆ ರೂ. 200ರಿಂದ ರೂ. 300ಗೆ ಹೆಚ್ಚಿಸಲಾಗಿದೆ.

ಪಿಂಚಣಿ ಮೊತ್ತವನ್ನುಹೆಚ್ಚಿಸುವುದರ ಜತೆಯಲ್ಲಿ ಫಲಾನುಭವಿಗಳು ಪಿಂಚಣಿ ಪಡೆಯುವ ಅರ್ಹ ಅವಧಿಯನ್ನು ಸಹ ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದ ಬಡತನ ರೇಖೆ ಕೆಳಗಿನ 76 ಲಕ್ಷ ವಿಧವೆಯರು ಹಾಗೂ 11 ಲಕ್ಷ ಅಂಗವಿಕಲರಿಗೆ ಪ್ರಯೋಜನವಾಗಲಿದೆ.
 

ಪಾಕ್‌ನಿಂದ ಮತ್ತೆ ಗುಂಡಿನ ದಾಳಿ
ಜಮ್ಮು  (ಪಿಟಿಐ):
ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕ್ ಜಮ್ಮು- ಕಾಶ್ಮೀರದ ಗಡಿಯಲ್ಲಿರುವ ಪೂಂಚ್  ವಲಯದಲ್ಲಿ ಭಾರತೀಯ ಸೇನಾ ಶಿಬಿರಗಳ ಮೇಲೆ ಗುಂಡಿನ ದಾಳಿ ನಡೆಸಿದೆ.

ಪೂಂಚ್ ವಲಯದ ಗಡಿಯಲ್ಲಿರುವ ಗೌಟರೈನ್ ಮತ್ತು ಮಾನ್‌ಕೊಟೆ ಎಂಬಲ್ಲಿ ಪಾಕಿಸ್ತಾನ ಸೇನೆ ಲಘು ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದ್ದು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಹ ದಾಳಿ ನಡೆಸಿತು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಯಾರು ಗಾಯಗೊಂಡಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT