ಬೆಂಗಳೂರು: `ಕನ್ನಡ ಭಾಷೆಯನ್ನು ಉಳಿಸಲು ಸರ್ಕಾರದ ಮೇಲೆಯೇ ಅವಲಂಬಿತವಾಗುವುದರ ಬದಲು ಎಲ್ಲರೂ ತಮ್ಮ ಸ್ವ ಪ್ರಯತ್ನದಿಂದ ಕನ್ನಡವನ್ನು ಉಳಿಸಬೇಕು' ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.
ಕರ್ನಾಟಕ ಕಲಾ ಸಂಘವು ಎಚ್ಎಎಲ್ ಘಾಟ್ಗೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 44ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಶಿಕ್ಷಣವು ಇಂದು ಉದ್ಯಮ ಕ್ಷೇತ್ರವಾಗಿ ಬೆಳೆಯುತ್ತಿದೆ. ಇದರಿಂದ ಹೆಚ್ಚಿನ ಹಣ ಬರುವ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಎಲ್ಲರಿಗೂ ಇಷ್ಟ. ಇದರಿಂದ ನಮ್ಮ ರಾಜಕಾರಣಿಗಳೂ ತಮ್ಮ ಸಹಾಯ ಹಸ್ತದಿಂದಲೇ ಒಂದೊಂದು ಇಂಗ್ಲಿಷ್ ಶಾಲೆಗಳನ್ನು ತೆರೆಯುತ್ತಾರೆ. ಆದರೆ, ಕನ್ನಡ ಶಾಲೆಗಳ ಕುರಿತು ಸೂಕ್ತ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗುವುದಿಲ್ಲ' ಎಂದು ವಿಷಾದಿಸಿದರು.
`ಕನ್ನಡದ ಪಾಠ ಮನೆಯಿಂದಲೇ ಆರಂಭವಾಗಬೇಕು. ನಮ್ಮ ಮಕ್ಕಳಿಗೆ ಕನ್ನಡದ ಹಣ್ಣು, ಗಿಡಗಳ ಹೆಸರು, ನದಿಗಳ ಮತ್ತು ಸಂಬಂಧಗಳ ಹೆಸರನ್ನು ತಿಳಿಸಬೇಕಾದುದು ಅಗತ್ಯವಾಗಿದೆ. ಇದಕ್ಕೆ ಪೋಷಕರು ಮನಸ್ಸು ಮಾಡಬೇಕು' ಎಂದು ಹೇಳಿದರು.
ಎಚ್ಎಎಲ್ ನೌಕರರ ಸಂಘದ ಸಹ ಕಾರ್ಯದರ್ಶಿ ಎನ್.ವಸಂತಕುಮಾರ್ ಮಾತನಾಡಿ, `ಕನ್ನಡದ ಸಾಹಿತಿಗಳು ಮತ್ತು ಕನ್ನಡ ಸಂಘಗಳಿಂದ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯವಿದೆ. ಕನ್ನಡವನ್ನು ಉಳಿಸಲು ಯಾವುದೇ ರಾಜಕಾರಣಿಗಳು ಏನೂ ಮಾಡುವುದಿಲ್ಲ' ಎಂದರು.
`ಬ್ರಿಟಿಷರು ಬಿಟ್ಟು ಹೋದರೂ ಇಂಗ್ಲಿಷ್ ವ್ಯಾಮೋಹವು ನಮ್ಮನ್ನು ಬಿಟ್ಟಿಲ್ಲ. ನಾವು ಇತ್ತೀಚೆಗೆ ಸ್ವ-ಗುಲಾಮಗಿರಿಯಲ್ಲಿ ತೊಡಗಿಕೊಂಡಿದ್ದೇವೆ. ನಮ್ಮ ನಾಡಿನಲ್ಲಿ ಕನ್ನಡಿಗರಿಗಿಂತ ಅನ್ಯ ಭಾಷಿಕ ಜನರೇ ಹೆಚ್ಚಾಗಿದ್ದಾರೆ' ಎಂದು ಹೇಳಿದರು.