ಅಂಥ ಸಂಸ್ಥೆಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯ ಪ್ರಶಂಸನೀಯ ಎಂದು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಹೇಳಿದರು. ಇಲ್ಲಿನ ಐಎಂಎ ಸಭಾಭವನದಲ್ಲಿ ಶನಿವಾರ ಪಿ.ಕೆ. ಸುಬ್ರಮಣ್ಯಂ ಚಾರಿಟೀಸ್ ಸಂಸ್ಥೆಯು ಏರ್ಪಡಿಸಿದ್ದ `ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಕುರಿತ ಅನಿಸಿಕೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ~ ಉದ್ಘಾಟಿಸಿ ಮಾತನಾಡಿದರು.
ಪಿ.ಕೆ ಸುಬ್ರಮಣ್ಯಂ ವ್ಯಕ್ತಿತ್ವವನ್ನು ಹಲವು ದಶಕಗಳಿಂದ ತಾವು ಮನಗಂಡಿದ್ದು, ಸಮಾಜದ ಏಳ್ಗೆಗೆ ತುಡಿಯುವ ಮನಸ್ಸು ಅವರದು. ಅವರ ಹೆಸರಿನ ಸಂಸ್ಥೆಯು ಈ ರೀತಿ ಸ್ವಯಂಸೇವಾ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಗಿಲ್ಲೇಸುಗೂರು ಗ್ರಾಮದ ಇನ್ಗ್ರಿಡ್ ಸಂಸ್ಥೆಯ ಗೋಪಿಕೃಷ್ಣ, ಕನಕಗಿರಿಯ ಸಮೂಹ ಸಂಸ್ಥೆ ನಿರ್ದೇಶಕ ನಾರಾಯಣಸ್ವಾಮಿ ಹಾಗೂ ಪ್ರೇರಣಾ ಸಂಸ್ಥೆ ಕಾರ್ಯದರ್ಶಿ ಪ್ರಮೋದ ಕುಲಕರ್ಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರು ತಮ್ಮ ಅನುಭವ, ಧ್ಯೇಯೋದ್ದೇಶ ಹಂಚಿಕೊಂಡರು.
ಚೆನ್ನೈನ ಲೆಕ್ಕ ಪರಿಶೋಧಕ ಆರ್. ಪ್ರಸನ್ನ ವೆಂಕಟೇಶನ್ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆಯನ್ನು ಯುಎಸ್ಎ ಎಮರಸನ್ನ ವಿ. ವಾಸುದೇವನ್ ವಹಿಸಿದ್ದರು.