ತರೀಕೆರೆ: ಜಿಲ್ಲೆ 12,500 ಸಾವಿರ ಸ್ವ ಸಹಾಯ ಗುಂಪುಗಳಿಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೂಲಕ ರೂ 108.5 ಕೋಟಿ ಹಣವನ್ನು ನೀಡಲಾಗಿದ್ದು, ರೂ 15.5 ಕೋಟಿ ಹಣವನ್ನು ಉಳಿತಾಯ ಮಾಡಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎ.ಆರ್.ರಾಜಶೇಖರ್ ತಿಳಿಸಿದರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂ ಗಣದಲ್ಲಿ ಗುರುವಾರ ನಡೆದ ಸಾಲವಿತರಣಾ ಸಮಾರಂಭದಲ್ಲಿ ತಾಲ್ಲೂಕಿನ ಸ್ವ ಸಹಾಯ ಗುಂಪುಗಳಿಗೆ ರೂ. 35 ಲಕ್ಷ ಹಣ ವಿತರಿಸಿ ಅವರು ಮಾತನಾಡಿದರು.
ಸಾಲ ವಸೂಲಾತಿಯಲ್ಲಿ ಬ್ಯಾಂಕ್ ಶೇ. 98ರಷ್ಟು ಮತ್ತು ಕೃಷಿ ಸಾಲದಲ್ಲಿ ಶೇ. 70ರಷ್ಟು ವಸೂಲಾತಿ ಮಾಡಲಾಗಿದೆ ಎಂದು ತಿಳಿಸಿದ ಅವರು, ತಾಲ್ಲೂಕಿನಲ್ಲಿರುವ ಎರಡು ಸಾವಿರ ಸ್ವ ಸಹಾಯ ಗುಂಪುಗಳಿಂದ ರೂ 3.6 ಕೋಟಿ ಹಣವನ್ನು ಉಳಿತಾಯ ಮಾಡಲಾಗಿದೆ ಎಂದರು.
ಸಹಕಾರ ಸಂಘಗಳು ತಾವು ಪಡೆದ ಸಾಲವನ್ನು ಯಾವ ಉದ್ದೇಶಕ್ಕಾಗಿ ಪಡೆ ದಿದ್ದವೋ ಅದೇ ಉದ್ದೇಶಕ್ಕೆ ಬಳಸಿಕೊಂಡಲ್ಲಿ ಮಾತ್ರ ಅಭಿವೃದ್ಧಿ ಸಾಧಿಸಬಹುದು. ಕಳೆದ ಮೂರು ವರ್ಷದಲ್ಲಿ ಚಾಲ್ತಿಯಲ್ಲಿರುವ ಸ್ವ ಸಹಾಯ ಗುಂಪುಗಳಿಗೆ ಹೆಚ್ಚಿನ ಪ್ರಮಾಣ ದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವಿ ಮಾತನಾಡಿ, ಬ್ಯಾಂಕಿನ ಇತಿಹಾಸದಲ್ಲಿ ದಾಖಲೆ ಪ್ರಮಾಣದ ಸಾಲ ಸೌಲಭ್ಯವನ್ನು ಬಯಲು ಪ್ರದೇಶದ ಜನತೆಗೆ ನೀಡಿರುವುದು ಸ್ವಾಗತಾರ್ಹ. ಮಹಿಳೆಯರು ತಾವು ಪಡೆದ ಸಾಲವನ್ನು ಸದ್ವಿನಿಯೋಗ ಪಡಿಸಿಕೊಳ್ಳಬೇಕು ಎಂದರು.
ಮ್ಯೋಮ್ಕೋಸ್ ನಿರ್ದೇಶಕ ಆರ್.ದೇವಾನಂದ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಎಪಿಎಂಸಿ ಸದಸ್ಯ ಶಿವಕುಮಾರ್ ಮತ್ತು ಶಿವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಟಿ. ರವಿ, ಬ್ಯಾಂಕಿನ ಮೇಲ್ವಿಚಾರಕ ಬಸವ ರಾಜಪ್ಪ ಮತ್ತು ನೋಡಲ್ ಅಧಿಕಾರಿ ಬಸವರಾಜ್ ಇದ್ದರು.