ತುಮಕೂರು: ಸ್ವಸಹಾಯ ಗುಂಪುಗಳ ಸದಸ್ಯರಿಗಾಗಿ ಭಾರತೀಯ ಜೀವ ವಿಮಾ ನಿಗಮ ಹಾಗೂ ಕರ್ನಾಟಕ ಸರ್ಕಾರ ‘ಆಮ್ ಆದ್ಮೀ ಬೀಮಾ’ ಉಚಿತ ವಿಮೆ ಸೌಲಭ್ಯ ಯೋಜನೆ ಜಾರಿಗೆ ತಂದಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ಭೂರಹಿತ ಗ್ರಾಮೀಣ ಕುಟುಂಬಗಳು, ಕಸುಬುದಾರರು, ಸ್ವಸಹಾಯ ಗುಂಪಿನ ಸದಸ್ಯರು ಯೋಜನೆಗೆ ಅರ್ಹರು. ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ವಾರ್ಷಿಕ ಕಂತು ₨ 200 ಪಾವತಿಸಲಿದ್ದು, ಇದು ಸಂಪೂರ್ಣ ಉಚಿತ ವಿಮೆಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಹಜ ಮರಣಕ್ಕೆ ₨ 30 ಸಾವಿರ, ಅಪಘಾತದಿಂದ ಮೃತಪಟ್ಟರೆ ₨ 75 ಸಾವಿರ, ಅಪಘಾತದಲ್ಲಿ ಕಣ್ಣು, ಕಾಲು ಕಳೆದುಕೊಂಡವರಿಗೆ ₨ 75 ಸಾವಿರ ವಿಮೆ ಪರಿಹಾರ ದೊರೆಯಲಿದೆ. ಅದೇ ರೀತಿ ಒಂದು ಕಣ್ಣು ಅಥವಾ ಕಾಲು ಕಳೆದುಕೊಂಡರೆ ₨ 37,500 ಪರಿಹಾರ ಸಿಗಲಿದ್ದು, ಈಗಾಗಲೇ ಡಿಸಿಸಿ ಬ್ಯಾಂಕ್ ವತಿಯಿಂದ 598 ಗುಂಪುಗಳ 8848 ಸದಸ್ಯರನ್ನು ವಿಮೆಗೆ ಒಳಪಡಿಸಲಾಗಿದೆ ಎಂದು ವಿವರಿಸಿದರು.
ಆಮ್ ಆದ್ಮೀ ಬೀಮಾ ಉಚಿತ ವಿಮಾ ಯೋಜನೆಯಲ್ಲಿ 9ರಿಂದ 12ನೇ ತರಗತಿ ಓದುತ್ತಿರುವ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ವಾರ್ಷಿಕ ₨ 1200 ವಿದ್ಯಾರ್ಥಿ ವೇತನ ಸಿಗಲಿದೆ. ಸದ್ಯ ಸ್ವಸಹಾಯ ಗುಂಪುಗಳನ್ನು ಗುರಿಯಾಗಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಿದ್ದು, ಮುಂದಿನ ದಿನಗಳಲ್ಲಿ ವಿಸ್ತರಿಸಲಾಗುವುದು ಎಂದರು.
ಗೋಶಾಲೆ ಆರಂಭ: ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಡಿಸಿಸಿ ಬ್ಯಾಂಕ್ ವತಿಯಿಂದ 45 ಗೋಶಾಲೆ ತೆರೆಯಲಾಗಿದೆ. ಗೋಶಾಲೆಗೆ ಜಾನುವಾರು ಕರೆತರುವ ರೈತರಿಗೆ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್, ಕುಡಿಯುವ ನೀರು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮಧುಗಿರಿ ತಾಲ್ಲೂಕಿನಲ್ಲಿ ಬಗರ್ಹುಕುಂ ಸಮಿತಿಗಳನ್ನು ರಚಿಸಲಾಗಿದ್ದು, ರೈತರ ಅರ್ಜಿ ಪರಿಶೀಲಿಸಲಾಗುತ್ತಿದೆ. ರಸ್ತೆ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆ ಜತೆ ಚರ್ಚಿಸಲಾಗಿದೆ. ತಾಲ್ಲೂಕಿನಲ್ಲಿ ₨ 30 ಕೋಟಿ ವೆಚ್ಚದ ಯುಜಿಡಿಗೆ ಮಂಜೂರಾತಿ ಸಿಕ್ಕಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಧುಗಿರಿ ತಾಲ್ಲೂಕು ಜಿಲ್ಲೆಯಲ್ಲೇ 2ನೇ ಸ್ಥಾನದಲ್ಲಿದೆ. ಆಸ್ತಿ ಸೃಷ್ಟಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆಯಾದರೆ ಬಹಳಷ್ಟು ಸಮಸ್ಯೆಗಳು ಬಗೆಹರಿಯಲಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.