ಬೀದರ್: ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ನೈತಿಕತೆ ಹಾಗೂ ಧರ್ಮ ಆಧಾರಿತ ನಡತೆ ಅಗತ್ಯ ಎಂದು ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಜಯಕುಮಾರ ಸಿಂಹ ಅಭಿಪ್ರಾಯಪಟ್ಟರು.ನಗರದ ಬಸವಗಿರಿಯಲ್ಲಿ ಹಮ್ಮಿಕೊಂಡಿರುವ ವಚನ ವಿಜಯೋತ್ಸವವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ ಮತ್ತು ಬದುಕು ಬೇರೆ ಬೇರೆ ಅಲ್ಲ. ಹೀಗಾಗಿ ಎಲ್ಲರು ಧರ್ಮದ ಮಾರ್ಗದಲ್ಲಿ ಸಾಗಿದರೆ ಮಾತ್ರ ಶಾಂತಿ, ನೆಮ್ಮದಿ ಹಾಗೂ ಶೋಷಣೆ ರಹಿತ ಸಮಾಜದ ಕಲ್ಪನೆ ಸಾಕಾರಗೊಳ್ಳಬಹುದು ಎಂದರು.
ವಿಜಾಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಚನ್ನವೀರ ಶಿವಾಚಾರ್ಯರು ಮಾತನಾಡಿದರು. ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಆಶಯ ಭಾಷಣ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರದ ಮಾಜಿ ಸಚಿವ ಸರ್ದಾರ್ ಬೂಟಾಸಿಂಗ್ ಅವರಿಗೆ ’ಗುರುಬಸವ ಪುರಸ್ಕಾರ’ ಪ್ರದಾನ ಮಾಡಲಾಯಿತು.ಶಾಸಕರಾದ ಬಸವರಾಜ ಪಾಟೀಲ್ ಅಟ್ಟೂರ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವರಾಜ ಬುಳ್ಳಾ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಇತರರು ಭಾಗವಹಿಸಿದ್ದರು.