ಗುಳೇದಗುಡ್ಡ: ಅದು ನಾಲ್ವತ್ತರ ದಶಕ, ಸ್ವಾತಂತ್ರ್ಯ ಚಳವಳಿಯ ಬಿಸಿ ಗುಳೇದಗುಡ್ಡಕ್ಕೂ ತಲುಪಿತ್ತು. ಗಾಂಧೀಜಿ ನೇತೃತ್ವದಲ್ಲಿ ದೇಶದಾದ್ಯಂತ ಚಳವಳಿ, ಸತ್ಯಾಗ್ರಹಗಳು ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಅನೇಕ ಕಡೆ ಚಳವಳಿಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು, ಗುಂಡು ಹಾರಿಸಿದ ಪ್ರಕರಣಗಳು ನಡೆದ ಬಗ್ಗೆ ಆಕಾಶವಾಣಿ ಮತ್ತು ದಿನಪತ್ರಿಕೆಗಳು ತರುತ್ತಿದ್ದ ಮೈ ನವಿರೇಳಿಸುವ ಘಟನೆಗಳು ಗುಳೇದಗುಡ್ಡದಲ್ಲಿ ಕೂಡ ದೇಶಪ್ರೇಮಿ ಯುವಕರ ಬಿಸಿ ರಕ್ತ ಕುದಿಯುವಂತೆ ಮಾಡಿತ್ತು.
ಗುಳೇದಗುಡ್ಡದ ಮಡಿವಾಳಪ್ಪ ರುದ್ರಪ್ಪ ಪಟ್ಟಣಶೆಟ್ಟಿ (ಎಂ.ಆರ್. ಪಟ್ಟಣಶೆಟ್ಟಿ) ಚಿಕ್ಕ ವಯಸ್ಸಿನಲ್ಲಿಯೇ ‘ದತ್ತಾತ್ರೇಯ’ ಎಂಬ ಹೆಸರಿನಲ್ಲಿ ವ್ಯಾಯಾಮ ಶಾಲೆಯನ್ನು ಸ್ಥಾಪಿಸಿದರು. ಅವರ ವ್ಯಾಯಾಮ ಶಾಲೆ ಬಾದಾಮಿ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರವಾಗಿ ರೂಪುಗೊಂಡಿತು. ಗಾಂಧೀಜಿಯ ತತ್ವ ಸಿದ್ಧಾಂತವನ್ನು ಈ ಭಾಗದಲ್ಲಿ ಪಸರಿಸತೊಡಗಿತು.
1935ರಲ್ಲಿ ಎಂ.ಆರ್. ಪಟ್ಟಣಶೆಟ್ಟಿ ಕಾಂಗ್ರೆಸ್ ದೀಕ್ಷೆ ಪಡೆದು ಸತ್ಯಾಗ್ರಹಿಯಾಗಿ ಜೈಲು ಸೇರಿದರು. ಚಲೇಜಾವ್ ಚಳವಳಿಯಲ್ಲಿ ಮತ್ತೆ ಜೈಲು ಸೇರಿದರು. ಜೈಲಿನಿಂದ ಮುಕ್ತರಾಗಲು ವರ್ಷವೇ ಕಳೆಯಿತು. ಜೈಲಿನಲ್ಲಿಯ ರಾಷ್ಟ್ರನಾಯಕರ ಒಡನಾಟದಲ್ಲಿ ನಾಯಕಮಣಿಯಾಗಿ ಊರಿನ ಕೀರ್ತಿ ಬೆಳಗಿಸಿದರು.
ಗುಳೇದಗುಡ್ಡ ಮತಕ್ಷೇತ್ರದ ಜನತೆ ಮಡಿವಾಳಪ್ಪನವರ ಪ್ರಾಮಾಣಿಕ ಕರ್ತವ್ಯ ಪ್ರಜ್ಞೆ ಕಂಡು 1952ರಲ್ಲಿ ಮುಂಬೈ ವಿಧಾನಸಭೆಗೆ ಶಾಸಕರನ್ನಾಗಿ ಆಯ್ಕೆ ಮಾಡಿದರು. ಬಳಿಕ ಮೈಸೂರು ವಿಧಾನಸಭೆಗೆ ನಾಲ್ಕೂ ಚುನಾವಣೆಗಳಲ್ಲಿ ಸತತವಾಗಿ ಆಯ್ಕೆಯಾದರು. ಪ್ರಭಾವಿ ರಾಜಕಾರಣಿಯಾಗಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.
1972ರಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದ್ದರಿಂದ ಕಾಂಗ್ರೆಸ್ ‘ಒ’ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಲು ವೀರೇಂದ್ರ ಪಾಟೀಲರಿಂದ ಕರೆ ಬಂದರೂ ಮನಸ್ಸು ಮಾಡದೇ ರಾಜಕೀಯದಿಂದ ದೂರ ಸರಿದರು.
ಸರಳ ಸಜ್ಜನ, ನಿಷ್ಠಾವಂತ ರಾಜಕಾರಣಿಯಾಗಿ ಸ್ವಾತಂತ್ರ್ಯಯೋಧ ಮಡಿವಾಳಪ್ಪನವರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ 75 ವರ್ಷ ತುಂಬಿದಾಗ ಪಟ್ಟಣದ ಜನತೆ 1988ರಲ್ಲಿ ಅಮೃತ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
1990ರಲ್ಲಿ ತಮ್ಮ 77ನೇ ವಯಸ್ಸಿನಲ್ಲಿ ಅವರು ನಿಧನ ಹೊಂದಿದರು.
ರಾಜಕೀಯ ಮುತ್ಸದ್ದಿಗಳಾದ ಎಸ್. ನಿಜಲಿಂಗಪ್ಪ, ಹಳ್ಳಿಕೇರಿ ಗುದ್ಲೆಪ್ಪ, ಅಂಬಲಿ ಚನ್ನಬಸಪ್ಪ, ದೊಡ್ಡಮೇಟಿ ಅಂದಾನೆಪ್ಪ ಅವರ ಸಾಲಿನಲ್ಲಿ ನಿಲ್ಲುವ ಎಂ. ಆರ್. ಪಟ್ಟಣಶೆಟ್ಟಿಯವರು ನಿಷ್ಠುರವಾದಿಯಾಗಿ, ಶುದ್ಧ ಚಾರಿತ್ರ್ಯ, ಶುದ್ಧ ಹಸ್ತರಾಗಿ, ನಿಸ್ವಾರ್ಥಜೀವಿಯಾಗಿ, ಕಾಯಕಯೋಗಿಯಾಗಿ, ಕೃಷಿಕರಾಗಿ, ಸಾರ್ಥಕ ಬದುಕು ಸಾಗಿಸಿದರು.
ಗುಳೇದಗುಡ್ಡದ ಜನತೆ ಇದೀಗ ಮಡಿವಾಳಪ್ಪನವರ ಜನ್ಮ ಶತಮಾನೋತ್ಸವ ಆಚರಿಸುತ್ತಿದ್ದು, ನಾಡಿನ ಮಠಾಧೀಶರು, ಜನಪ್ರತಿನಿಧಿಗಳು, ಅಭಿಮಾನಿಗಳು ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸುತ್ತಿರುವುದು ವಿಶೇಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.