ಕೆಂಭಾವಿ: ಪಟ್ಟಣದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ಪೊಲೀಸ್ ಅಧಿಕಾರಿ ಭೀಮಾಚಾರ್ಯ ಪುರೋಹಿತ (92) ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಅವರು, ಬ್ರಿಟಿಷರ ವಿರುದ್ಧ ಹೋರಾಡಿ ಸೆರೆವಾಸ ಅನುಭವಿಸಿದ್ದರು. ಹೈದರಾಬಾದ್-ಕರ್ನಾಟಕ ವಿಮೋಚನಾ ಹೋರಾಟದಲ್ಲೂ ಭಾಗಿಯಾಗಿದ್ದರು. ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸ್ವಾತಂತ್ರ್ಯ ಸನ್ಮಾನ, ಪೊಲೀಸ್ ಇಲಾಖೆಯ ಉತ್ತಮ ಸೇವಾ ಪ್ರಶಸ್ತಿ, 15 ಸ್ವಾತಂತ್ರ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
ಅವರಿಗೆ ಒಬ್ಬ ಪುತ್ರ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ.
ಗೌರವ ಸಮರ್ಪಣೆ: ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಶುಕ್ರವಾರ ಭೀಮಾಚಾರ್ಯ ಮನೆಗೆ ತೆರಳಿ ಅಂತಿಮ ಗೌರವ ಸಲ್ಲಿಸಿದರು.
ಸಂತಾಪ: ಸ್ವಾತಂತ್ರ್ಯ ಹೋರಾಟಗಾರ ಭೀಮಾಚಾರ್ಯ ನಿಧನಕ್ಕೆ ಶಾಸಕರಾದ ಗುರುಪಾಟೀಲ ಶಿರವಾಳ, ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧನಗೌಡ ಪೊಲೀಸ್ಪಾಟೀಲ, ಸುರಪುರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಅನ್ನಪೂರ್ಣ ಮಾಲಿಪಾಟೀಲ, ಸದಸ್ಯ ಖಾಜಾ ಪಟೇಲ, ಸುರೇಂದ್ರರಾವ ಕುಲಕರ್ಣಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ ಸಂತಾಪ ಸೂಚಿಸಿದ್ದಾರೆ.