ನವದೆಹಲಿ (ಪಿಟಿಐ): ದಿವ್ಯ ಯೋಗ ಮಂದಿರ ಟ್ರಸ್ಟ್ ಸಂಸ್ಥಾಪಕ ಸ್ವಾಮಿ ಶಂಕರ್ ದೇವ್ ಅವರ ನಾಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸುವ ಉತ್ತರಾಖಂಡ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬಾಬಾ ರಾಮ್ದೇವ್, ತಾವು ಯಾವುದೇ ರೀತಿಯ ವಿಚಾರಣೆಗೂ ಸಿದ್ಧ ಎಂದು ತಿಳಿಸಿದ್ದಾರೆ.
ಸ್ವಾಮಿ ನಾಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅಥವಾ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದ ತಂಡವು ತನಿಖೆ ನಡೆಸಬೇಕು ಎಂದು ತಾವು ಕಳೆದ ವರ್ಷವೇ ರಾಷ್ಟ್ರಪತಿ ಅವರಿಗೆ ಮನವಿಪತ್ರ ಸಲ್ಲಿಸಿದ್ದು, ಯಾವುದೇ ರೀತಿಯ ತನಿಖೆಗೂ ಹೆದರುವುದಿಲ್ಲ ಎಂದು ರಾಮ್ದೇವ್ ತಿಳಿಸಿದ್ದಾರೆ.
ರಾಜ್ಯ ಪೊಲೀಸರು ಸ್ವಾಮಿ ನಾಪತ್ತೆ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸದಿದ್ದರಿಂದ ಉತ್ತರಾಖಂಡ ಸರ್ಕಾರವು ಶುಕ್ರವಾರ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರ್ಧರಿಸಿ ಅಧಿಸೂಚನೆ ಹೊರಡಿಸಿದೆ.