ಧಾರವಾಡ: `ಸಾಹಿತಿ ಬಸವರಾಜ ಕಟ್ಟೀಮನಿ ಅವರು ಸ್ವಾಮೀಜಿಗಳ, ರಾಜಕಾರಣಿಗಳನ್ನು ಮುಖವಾಡವನ್ನು ಕಳಚಿದ್ದರು~ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಎಂ.ಕಲಬುರ್ಗಿ ಅಭಿಪ್ರಾಯಪಟ್ಟರು.
ಬಸವರಾಜ ಕಟ್ಟೀಮನಿ ವಿಚಾರ ವೇದಿಕೆ ಹಾಗೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, `ಶ್ರೀರಂಗರು ಬ್ರಾಹ್ಮಣ ಸಮಾಜದ ಮುಖವಾಡವನ್ನು ಕಳಚಿದರೆ, ಕಟ್ಟೀಮನಿ ಅವರು ಲಿಂಗಾಯತ ಸಮಾಜದ ಮುಖವಾಡ ಬಯಲುಗೊಳಿಸಿದರು. ದಾಸೋಹದ ಹೆಸರಿನಲ್ಲಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಶೋಷಣೆಯ ಬಗ್ಗೆಯೂ ತಮ್ಮ ಜರತಾರಿ ಜಗದ್ಗುರು ಕೃತಿಯಲ್ಲಿ ದಾಖಲಿಸ್ದ್ದಿದರು~ ಎಂದರು.
`ಪ್ರತಿಷ್ಠಾನವು ಸ್ಥಾಪನೆಯಾದ ಕೆಲವೇ ತಿಂಗಳಲ್ಲಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ದುಡಿದಿದ್ದರಿಂದ ಇತ್ತೀಚೆಗಷ್ಟೇ ಇಬ್ಬರು ಪತ್ರಕರ್ತರಿಗೆ ಕಟ್ಟೀಮನಿ ಹೆಸರಿನಲ್ಲಿ ತಲಾ 50 ಸಾವಿರ ನಗದು ಬಹುಮಾನ ಒಳಗೊಂಡ ಪ್ರಶಸ್ತಿ ನೀಡಲಾಗಿದೆ.
`ಜ್ವಾಲಾಮುಖಿಯ ಮೇಲೆ~ ಕಾದಂಬರಿಯಿಂದಲೇ ಅವರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ದೊರೆತಿದ್ದರಿಂದ ಆ ಕೃತಿಯನ್ನು ರಷ್ಯನ್ಗೆ ಭಾಷಾಂತರ ಮಾಡಲಾಗುತ್ತಿದೆ. ಮಾಡಿ ಮಡಿದವರು ಕೃತಿಯನ್ನು ಇಂಗ್ಲಿಷ್, ಮರಾಠಿಗೆ ಅನುವಾದಿಸಲಾಗಿದೆ. ಅವರ ನೆನಪಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಾಲೇಜುಗಳಿಗೆ ಎರಡು ಸಾವಿರ ರೂಪಾಯಿ, ಸಂಸ್ಥೆಗಳಿಗೆ ರೂ 5 ಸಾವಿರ ಸಹಾಯಧನ ನೀಡಲಾಗುವುದು~ ಎಂದು ಡಾ.ಕಲಬುರ್ಗಿ ಹೇಳಿದರು.
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ, ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಹಾಗೂ ಪ್ರಾಧ್ಯಾಪಕ ಡಾ.ಎಂ.ಡಿ.ಒಕ್ಕುಂದ ಉಪನ್ಯಾಸ ನೀಡಿದರು.
ಗಾಯಕಿ ಜ್ಯೋತಿ ಕೂಡ್ಲಿಗಿ ಅವರು ಕಾರ್ಯಕ್ರಮದಲ್ಲಿ ಗೀತೆಗಳನ್ನು ಪ್ರಸ್ತುತಪಡಿಸಿದರು.