ಬರೇಲಿ (ಪಿಟಿಐ): ಸ್ವಿಸ್ ಬ್ಯಾಂಕಿನಲ್ಲಿ ಅಡಗಿಸಿಟ್ಟಿರುವ ಭಾರತೀಯರ ಕಪ್ಪು ಹಣದಲ್ಲಿ ಅರ್ಧದಷ್ಟು ಹಣ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದವರಿಗೇ ಸೇರಿದ್ದಾಗಿದೆ ಎಂದು ಸಂಸತ್ ಸದಸ್ಯೆ ಮೇನಕಾ ಗಾಂಧಿ ಆರೋಪಿಸಿದರು.
ಭಾನುವಾರ ರಾತ್ರಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಿಬಿಐಯನ್ನು ತನ್ನ ಲಾಕರಿನಲ್ಲಿಟ್ಟುಕೊಂಡಿದ್ದು, ತನಗೆ ಬೇಕಾದಾಗ, ಬೇಕಾದಂತೆ ಬಳಸಿಕೊಳ್ಳುತ್ತಿದೆ ಎಂದೂ ಆಪಾದಿಸಿದರು.
ಬಾಬಾ ರಾಮ್ದೇವ್ ಹಾಗೂ ಅಣ್ಣಾ ಹಜಾರೆ ಅವರ ಬಗ್ಗೆ ಕಾಂಗ್ರೆಸ್ ತೋರುತ್ತಿರುವ ವರ್ತನೆಯನ್ನು ಟೀಕಿಸಿದ ಅವರು, ಸ್ವಿಸ್ ಬ್ಯಾಂಕಿನಲ್ಲಿ ಹಣ ಇಟ್ಟಿರುವ ಕಾಂಗ್ರೆಸ್ ಪಕ್ಷದವರು ಅದರ ವಿರುದ್ಧ ಕೇಳಿ ಬರುವ ಧ್ವನಿಗಳನ್ನು ದಮನ ಮಾಡಲು ಹೊರಟಿದ್ದಾರೆ ಎಂದು ಅವರು ಹೇಳಿದರು.
ಆಗಸ್ಟ್ 16ರಿಂದ ನಡೆಯಲಿರುವ ಅಣ್ಣಾ ಹಜಾರೆ ಅವರ ಚಳವಳಿಯನ್ನು `ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ~ ಎಂದು ಮೇನಕಾ ವ್ಯಾಖ್ಯಾನಿಸಿದರು.
ಮುಂದಿನ ತಿಂಗಳು ನಡೆಯಲಿರುವ ಸಭೆಯಲ್ಲಿ ಲೋಕಪಾಲ ಮಸೂದೆ ಕುರಿತು ತಮ್ಮ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಒಮ್ಮತದಿಂದ ಸ್ವೀಕರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.