ಸಿಂಧನೂರು: ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಜೋರಾಗಿದ್ದು ಲಕ್ಷ್ಮೀಕ್ಯಾಂಪ್, ರೌಡಕುಂದಾ, ಸಾಲಗುಂದಾ, ಮುಕ್ಕುಂದಾ, ಹುಡಾ ಮತ್ತಿತರ ಕಡೆಗಳಲ್ಲಿ ಪ್ರಚಾರಕ್ಕೆ ಹೋದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ಷೇತ್ರದಲ್ಲಿ ಹಂಪನಗೌಡರು ಜಯಭೇರಿ ಬಾರಿಸಿ ಕಾಂಗ್ರೆಸ್ ಬಾವುಟ ಹಾರಿಸಲಿದ್ದಾರೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಮಧುಯಾಸ್ಕಿನ್ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಬಾದರ್ಲಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಈಗಾಗಲೇ ತಾವು ಎಲ್ಲ ಕ್ಷೇತ್ರಗಳಿಗೆ ತೆರಳಿ ವೀಕ್ಷಣೆ ಮಾಡಿದ್ದು ಮತದಾರರಲ್ಲಿ ಪ್ರಬುದ್ಧತೆ ಕಂಡುಬರುತ್ತಿದೆ. ಬಿಜೆಪಿಯ ದುರಾಡಳಿತಕ್ಕೆ ಬೇಸತ್ತಿರುವ ಅವರು ಖಂಡಿತ ಈ ಬಾರಿ ಕಾಂಗ್ರೆಸ್ಗೆ ಮಣೆ ಹಾಕಲಿದ್ದಾರೆ ಎಂದರು.
1987ರಲ್ಲಿ ಆಂಧ್ರಪ್ರದೇಶ-ಕರ್ನಾಟಕ ಕಾಂಗ್ರೆಸ್ ಭದ್ರಕೋಟೆಯಾಗಿದ್ದವು. ಆಂಧ್ರದಲ್ಲಿ 2004ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಅಭೂತಪೂರ್ವ ಜಯ ಸಿಕ್ಕಿತ್ತು. ಅದೇ ವೈಭವ ಈಗ ಕರ್ನಾಟಕದಲ್ಲೂ ಮರುಕಳಿಸುವ ವಾತಾವರಣ ಕಂಡುಬರುತ್ತಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಮುಖಂಡರಾದ ಎಂ.ಕಾಳಿಂಗಪ್ಪ, ಜಾಫರ್ ಜಾಗೀರದಾರ ಇದ್ದರು.
ವಿನೂತನ ಪ್ರಚಾರ
ಸಿಂಧನೂರು: ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಕರ್ನಾಟಕ ಜನತಾ ಪಕ್ಷದಿಂದ ಸ್ಪರ್ಧಿಸಿರುವ ರಾಜಶೇಖರ ಪಾಟೀಲ್ ವಿನೂತನ ಪ್ರಚಾರ ಕೈಗೊಂಡಿದ್ದಾರೆ. ಮೊಬೈಲ್ ತಂತ್ರಜ್ಞಾನದ ಮೂಲಕ `ನಾನು ರಾಜಶೇಖರ ಪಾಟೀಲ್. ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ದಯವಿಟ್ಟು ಆಶೀರ್ವದಿಸಿ' ಎನ್ನುವ ಟೋನ್ ಜನರ ಮೊಬೈಲ್ಗಳಿಗೆ ಕಳಿಸಲಾಗುತ್ತಿದೆ. ಈ ನೂತನ ತಂತ್ರಜ್ಞಾನ ಪ್ರಚಾರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕೆಜೆಪಿ ಮುಖಂಡ ಮಲ್ಲಿಕಾರ್ಜುನ ಪಾಟೀತಿಳಿಸಿದರು.