ಬೆಂಗಳೂರು: ಆಚಾರ್ಯ ವಿದ್ಯಾನಂದರ ಮುನಿದೀಕ್ಷೆಯ ಸ್ವರ್ಣ ಜಯಂತಿ ಸವಿನೆನಪಿನಲ್ಲಿ ಸ್ಥಾಪಿಸಿರುವ `ಚಾರಿತ್ರ ಚಕ್ರವರ್ತಿ ಪುರಸ್ಕಾರ~ಕ್ಕೆ ಹಿರಿಯ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು ಒಂದು ಲಕ್ಷ ರೂ ನಗದು ಹಾಗೂ ಸ್ವರ್ಣ ಪದಕ ಒಳಗೊಂಡಿದ್ದು, ನವದೆಹಲಿಯಲ್ಲಿ ಜುಲೈ 29ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಾಲ್ನಡಿಗೆಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಚರಿಸಿ ಜನರಲ್ಲಿ ಮೌಲಿಕ ಆಧ್ಯಾತ್ಮಿಕ ಚಿಂತನೆಗಳನ್ನು ಬಿತ್ತಿದ ರಾಷ್ಟ್ರ ಸಂತ ಆಚಾರ್ಯ ವಿದ್ಯಾನಂದಮುನಿಗಳು ಬೆಳಗಾವಿಯ ಚಿಕ್ಕೋಡಿ ತಾಲ್ಲೂಕಿನ ಶೇಡಬಾಳ ಗ್ರಾಮದವರು. ಎರಡೂವರೆ ದಶಕಗಳಿಂದ ಅವರು ನವದೆಹಲಿಯಲ್ಲಿ ನಿರಂತರ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಮಾತ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
`ಮುನಿಗಳು ದಿಗಂಬರ ಮುನಿದೀಕ್ಷೆ ಸ್ವೀಕರಿಸಿ ಜುಲೈ 25ಕ್ಕೆ 50 ವರ್ಷ ತುಂಬಲಿದೆ. ಮುನಿ ದೀಕ್ಷೆಯ ಸ್ವರ್ಣ ಜಯಂತಿ ಕಾರ್ಯಕ್ರಮಗಳನ್ನು ಜುಲೈ 25ರಿಂದ ಒಂದು ವರ್ಷ ಕಾಲ ವಿವಿಧೆಡೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಎಂದು ನವದೆಹಲಿಯ ಕುಂದಕುಂದ ಭಾರತಿ ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.